ಮೈಸೂರು-ಕುಶಾಲನಗರ‌ ನೂತನ ರೈಲು ಮಾರ್ಗ: 1000 ಕೋಟಿ ರೂ. ಅನುದಾನ ಘೋಷಿಸಿದ‌ ಕೇಂದ್ರ

ಹೊಸದಿಗಂತ ವರದಿ, ಮಡಿಕೇರಿ:

ಮೈಸೂರು-ಕುಶಾಲನಗರ ನೂತನ ರೈಲು ಮಾರ್ಗಕ್ಕೆ ಕೇಂದ್ರ ಸರಕಾರ ಒಂದು ಸಾವಿರ ಕೋಟಿ ರೂ.ಗಳ ಅನುದಾನ ಘೋಷಿಸಿದೆ.
ಮೈಸೂರು-ಕುಶಾಲನಗರ ನಡುವಿನ ನೂತನ 87.2 ಕಿ.ಮೀ. ಮಾರ್ಗ ನಿರ್ಮಾಣಕ್ಕೆ 1,854.62 ಕೋಟಿ ರೂ. ವೆಚ್ಚವಾಗಲಿದೆ ಎಂದು 2019ರ ಫೆಬ್ರವರಿಯಲ್ಲಿ ನಡೆದ ಸಮೀಕ್ಷೆಯಲ್ಲಿ ಅಂದಾಜಿಸಲಾಗಿತ್ತು.
ಪಿಯೂಷ್ ಗೋಯೆಲ್ ಅವರು ರೈಲು ಸಚಿವರಾಗಿದ್ದಾಗ ರೈಲು ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತ್ತು.
ಪ್ರತಿ ಕಿ.ಮೀ ಮಾರ್ಗ ನಿರ್ಮಾಣಕ್ಕೆ 21.27 ಕೋಟಿ ವೆಚ್ಚವಾಗಲಿರುವುದಾಗಿ ಅಂದಾಜಿಸಲಾಗಿದೆ. 274.65 ಹೆಕ್ಟೇರ್‌ ಒಣಭೂಮಿ ಮತ್ತು 275.15 ಹೆಕ್ಟೇರ್ ನೀರಾವರಿ ಜಮೀನು ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.
ಇದೀಗ 2022-23ರ ಬಜೆಟ್‌ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಯೋಜನೆಗೆ 1000 ಕೋಟಿ ರೂ. ಅನುದಾನ ಘೋಷಿಸಿದ್ದು, ಆ ಮೂಲಕ ಕೇಂದ್ರ ಸರ್ಕಾರವು ರಾಜ್ಯಕ್ಕೆ ಮತ್ತೊಂದು ಸಿಹಿ ಸುದ್ದಿ ನೀಡಿದಂತಾಗಿದೆ.
ಮೈಸೂರು-ಕುಶಾಲನಗರ ರೈಲು ಮಾರ್ಗ ನಿರ್ಮಾಣವಾದಲ್ಲಿ ಕೊಡಗಿನ ಕಾಫಿ,‌ಕರಿಮೆಣಸು ಸೇರಿದಂತೆ ವಾಣಿಜ್ಯ ಬೆಳೆಗಳ ಉತ್ಪನ್ನಗಳ‌ ರಫ್ತು ವಹಿವಾಟು ಚುರುಕುಗೊಳ್ಳುವ ವಿಶ್ವಾಸ ವ್ಯಕ್ತವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!