ಹೊಸದಿಗಂತ ಡಿಜಿಟಲ್ ಡೆಸ್ಕ್:
ಮರಿಯಪೋಲ್ ನ ಉಕ್ಕಿನ ಕಾರ್ಖಾನೆಯಲ್ಲಿರುವ ಉಕ್ರೇನ್ ಸೈನಿಕರಿಗೆ ಕೂಡಲೇ ಶಸ್ತ್ರಾಸ್ತ್ರ ತ್ಯಜಿಸುವಂತೆ ರಷ್ಯಾ ಕೊನೆಯ ಗಡುವು ನೀಡಿದೆ. ಪೂರ್ವಾಭಾಗದಿಂದ ರಷ್ಯಾ ಸೇನೆಯು ಗೆಲ್ಲುತ್ತ ಮುಂದುವರಿಯುತ್ತಿದ್ದು ಈ ನಡುವೆ ಪಾಶ್ಚಿಮಾತ್ಯ ದೇಶಗಳು ಉಕ್ರೇನ್ ಗೆ ಹೆಚ್ಚಿನ ಸಹಾಯ ಘೋಷಿಸಿವೆ.
ನಿನ್ನೆ ರಷ್ಯಾ ಉಕ್ರೇನ್ ಗೆ ಶರಣಾಗಿ ಇಲ್ಲವೇ ಮುಂದಿನ ಹಂತದ ಯುದ್ಧಕ್ಕೆ ಸಿದ್ಧರಾಗಿ ಎಂದು ಎಚ್ಚರಿಕೆ ನೀಡಿತ್ತು. ಆದರೆ ಇದಕ್ಕೆ ಬಗ್ಗದ ಉಕ್ರೇನ್ ಶರಣಾಗತಿಯ ಮಾತೇ ಇಲ್ಲ ಎಂದಿದೆ. ಈ ಕುರಿತು ರಷ್ಯಾ ರಕ್ಷಣಾ ಸಚಿವಾಲಯ ಇಂದು ಮತ್ತೆ ನವೀಕರಿಸಿದ ಪ್ರಸ್ತಾಪವನ್ನು ಮುಂದಿಟ್ಟಿದ್ದು “ನಿನ್ನೆಯ ಗಡುವಿಗೆ ಒಬ್ಬನೇ ಒಬ್ಬ ಉಕ್ರೇನ್ ಸೈನಿಕ ಶಸ್ತ್ರಾಸ್ತ್ರ ಕೆಳಗಿಟ್ಟಿಲ್ಲ, ರಷ್ಯಾ ಸೈನ್ಯವು ಮಾನವೀಯ ತತ್ವಗಳ ಆಧಾರದ ಮೇಲೆ ಮತ್ತೊಂದು ಪ್ರಸ್ತಾಪ ಮುಂದಿಡುತ್ತಿದೆ. ಉಕ್ರೇನ್ನ ಸೈನಿಕರು, ಮತ್ತು ಎಲ್ಲ ಬಾಡಿಗೆ ಸೈನಿಕರು ಕೂಡಲೇ ಶರಣಾಗಬೇಕು.” ಎಂದು ಗಡುವು ನೀಡಿದೆ.
ಉಕ್ರೇನ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು “ಮರಿಯಪೋಲ್ ನ ಉಕ್ಕಿನ ಕಾರ್ಖಾನೆಯ ಮೇಲೆ ರಷ್ಯಾ ಬಂಕರ್ ಪ್ರತಿರೋಧಕ ಬಾಂಬುಗಳಿಂದ ದಾಳಿ ನಡೆಸುತ್ತಿದೆ. ಮಕ್ಕಳು ಸಾಯುತ್ತಿರುವುದನ್ನುಆನ್ ಲೈನ್ ನಲ್ಲಿ ನೋಡಿ ಜಗತ್ತು ಸುಮ್ಮನಿದೆ” ಎಂದು ಖೇದ ವ್ಯಕ್ತಪಡಿಸಿದೆ.
ಅಮೆರಿಕ,ಫ್ರಾನ್ಸ್, ಕೆನಡಾ ದೇಶಗಳು ಹೆಚ್ಚಿನ ಮಿಲಿಟರಿ ನೆರವು ನೀಡುವುದಾಗಿ ಘೋಷಿಸಿದ್ದು, ಹೊಸ ನಿರ್ಬಂಧಗಳನ್ನು ರಚಿಸಲಾಗುತ್ತಿದೆ ಎಂದು ಶ್ವೇತ ಭವನ ಹೇಳಿದೆ. ಈ ಕುರಿತು ವಿಶ್ವಸಂಸ್ಥೆ ಅಧ್ಯಕ್ಷ ಆಂಟೋನಿಯೋ ಗುಟೆರಸ್ “ನಾಲ್ಕುದಿನಗಳ ಯುಧ್ದ ವಿರಾಮ ನೀಡಿ ನಾಗರೀಕರು ತಪ್ಪಿಸಿಕೊಳ್ಳಲು ಮತ್ತು ಮಾನವೀಯ ಸಹಾಯವನ್ನು ತಲುಪಿಸಲು ಅನುಕೂಲ ಮಾಡಿಕೊಡುವಂತೆ” ಕೇಳಿಕೊಂಡಿದ್ದಾರೆ.