ಹೊಸದಿಗಂತ ವರದಿ, ಮೈಸೂರು:
ಬೇರೆ ಬೇರೆ ವಿಚಾರಗಳ ಚರ್ಚೆಗಾಗಿ ದೆಹಲಿಗೆ ಹೋಗುತ್ತಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸೋಮವಾರ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಇಂದು ಮಹಾರಾಷ್ಟ್ರ ಗಡಿ ವಿವಾದ ಕುರಿತು ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಮುಂದೆ ಇರುವುದರಿಂದ ನಾವು ಬಹಿರಂಗವಾಗಿ ಚರ್ಚೆ ಮಾಡುವುದರಿಂದ ಕೆಲವೊಮ್ಮ ಕೆಲವು ಪರಿಣಾಮಗಳಾಗತ್ತೆ. ಅದಕ್ಕೆ ಸುಪ್ರೀಂಕೋರ್ಟ್ ನಲ್ಲಿ ತೀರ್ಮಾನವಾಗಲಿದೆ. ಇಂದು ಸಂಜೆ ದೆಹಲಿ ಹೋಗುತ್ತಿದ್ದೇನೆ. 30 ರಂದು ಮಹಾರಾಷ್ಟ್ರ ಗಡಿ ವಿಚಾರ ತೀರ್ಪು ಬರುತ್ತೆ. ಆ ತೀರ್ಪಿನ ಸಾಧಕ ಬಾಧಕಗಳ ಬಗ್ಗೆ ಪೂರ್ವ ಚರ್ಚೆಯನ್ನು ನಡೆಸುತ್ತೇನೆ. ಅದರ ಜೊತೆಗೆ ಬೇರೆ ಬೇರೆ ವಿಚಾರಗಳು ಚರ್ಚೆಯಾಗಲಿದೆ ಎಂದರು.
ಒಕ್ಕಲಿಗರ ಮೀಸಲಾತಿ ವಿಚಾರಕ್ಕೆ ಡೆಡ್ ಲೈನ್ ಕುರಿತು ಪ್ರತಿಕ್ರಿಯಿಸಿ ಡೆಡ್ ಲೈನ್ ನೀಡಿರುವುದು ನನ್ನ ಗಮನಕ್ಕೆ ಬಂದಿಲ್ಲ. ಅವರ ಲೆಟರ್ ನನ್ನ ಕೈ ಸೇರಲಿ. ನಾನು ಮುಂದೆ ಏನು ಮಾಡಬೇಕೆಂದು ನಿರ್ಧಾರ ಮಾಡುತ್ತೇನೆ. ಸಂವಿಧಾನದ ಚೌಕಟ್ಟಿನಲ್ಲಿ ಮಾಡಬೇಕು. ರಾಜ್ಯದ ಎಲ್ಲ ಸಮುದಾಯಗಳ ಹಿತ ಚಿಂಚತನೆ ಮಾಡುವ ವ್ಯಕ್ತಿಗೆ ಪ್ರೆಶರ್ ಅಲ್ಲ. ನಾನು ಎಲ್ಲಾ ರೀತಿಯ ಆಲೋಚನೆ ಮಾಡಬೇಕಾಗುತ್ತದೆ ಎಂದರು.
ಏಕರೂಪ ನಾಗರಿಕ ಸಂಹಿತೆ ಜಾರಿ ಕುರಿತು ಪ್ರತಿಕ್ರಿಯಿಸಿ ಕೇಂದ್ರ ತಯಾರಿ ನಡೆಸಿದೆ. ನನ್ನೊಂದಿಗೆ ಕೇಂದ್ರದಿಂದ ಯಾರೂ ಸಮಾಲೋಚನೆ ಮಾಡಿಲ್ಲ. ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡಬೇಕೆಂಬುದು ನಮ್ಮ ಪಕ್ಷದ 30 ವರ್ಷಗಳ ನಿಲುವು. ಈ ಬಗ್ಗೆ ನಾನು ಸಹ ಎಲ್ಲಾ ರೀತಿಯ ಮಾಹಿತಿ ಕಲೆ ಹಾಕುತ್ತಿದ್ದೇನೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.
ಭತ್ತಮತ್ತು ರಾಗಿ ಖರೀದಿ ಕೇಂದ್ರವನ್ನು ಮೈಸೂರು,ಮಂಡ್ಯದಲ್ಲಿ ತೆಗೆಯಬೇಕೆನ್ನುವುದು ಇದೆ, ಮಂಗಳೂರಿನಲ್ಲಿ ಈಗಾಗಲೇ ತೆರೆದಿರುವಂಥದ್ದು , ಕೇವಲ ತಪ್ಪು ಕಲ್ಪನೆ ಇದೆ. ಮಂಗಳೂರಿನಲ್ಲಿ ಕುಚಲಕ್ಕಿ ಊಟ ಮಾಡುತ್ತಾರೆ. ಅದರ ಸಲುವಾಗಿ ಅದಕ್ಕೆ ಸೀಮಿತವಾಗಿ ಖರೀದಿ ಮಾಡಲು ಹೇಳಿದ್ದೇವೆ. ಭತ್ತ ಖರೀದಿಯನ್ನು ಇಡೀ ರಾಜ್ಯದಲ್ಲೂ ಮಾಡಲಾಗುವುದು ಎಂದು ತಿಳಿಸಿದರು.
೩೦೦ರೂ.ಕೊಟ್ಟು ಲಾಗಿನ್ ಆದರೆ ಆಧಾರ್ ಇನ್ನಿತರ ಗುರುತಿನ ಪತ್ರ ಮಾಡಿಕೊಡುವ ವೆಬ್ ಸೈಟ್ ಗಳ ಕುರಿತು ಪ್ರತಿಕ್ರಿಯಿಸಿ ಬಹಳ ವೆಬ್ ಸೈಟ್ ಗಳು ಬಂದಿವೆ. ವೋಟರ್ ಐಡಿ ಸಂಬಂಧ ತನಿಖೆಯಾಗಲಿದೆ. ಈ ವಿಷಯಗಳು ಬೇರೆ ಬೇರೆ ಎಲ್ಲ ವೆಬ್ ಸೈಟ್ ಗಳು ಏನು ಮಾಡುತ್ತಿವೆ ಎಂದು ತನಿಖೆ ಆಗಲಿದೆ ಎಂದರು.
ವಿಪಕ್ಷಗಳ ಸಹಕಾರವಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ಅವರ ಕೆಲಸ ಅವರು ಮಾಡುತ್ತಾರೆ. ರಾಜ್ಯ ನೆಲ, ಜಲ,ಗಡಿಯ ಬಗ್ಗೆ ವಿಷಯ ಬಂದಾಗ ಕೋ ಅಪರೇಟ್ ಮಾಡುತ್ತಿದ್ದಾರೆ. ರಾಜಕಾರಣದ ವಿಷಯಕ್ಕೆ ಬಂದಾಗ ಅವರ ರಾಜಕಾರಣ ಅವರು ಮಾಡುತ್ತಾರೆ. ನಮ್ಮ ರಾಜಕಾರಣ ನಾವು ಮಾಡುತ್ತೇವೆ ಎಂದರು.
ಪಾರಂಪರಿಕ ಕಟ್ಟಡ ಕುಸಿತ ಉಳಿಸಿಕೊಳ್ಳುವ ಕ್ರಮದ ಕುರಿತು ಪ್ರತಿಕ್ರಿಯಿಸಿ ಮಾಹಿತಿ ತರಿಸಿಕೊಂಡು ಹಣಕಾಸಿನ ವ್ಯವಸ್ಥೆ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ