ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ಯವತ್ಮಾಲ್ನಲ್ಲಿ ಚುನಾವಣಾ ಸಮಾವೇಶದಲ್ಲಿ ಕೇಂದ್ರ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ನಿತಿನ್ ಗಡ್ಕರಿ ವೇದಿಕೆಯಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ತಕ್ಷಣ ಗಡ್ಕರಿ ಅವರನ್ನು ಚಿಕಿತ್ಸೆಗಾಗಿ ಸಾಗಿಸಲಾಯಿತು.
ಈ ಹಂತದಲ್ಲಿ ನಿತಿನ್ ಗಡ್ಕರಿ ಅವರ ಮುಖದ ಮೇಲೆ ನೀರು ಚಿಮುಕಿಸುವ ಮೂಲಕ ಅವರನ್ನು ಎಬ್ಬಿಸುವ ಪ್ರಯತ್ನವನ್ನೂ ಮಾಡಿದರು. ಬಳಿಕ ವೇದಿಕೆಯಲ್ಲಿದ್ದ ಜನರನ್ನು ಬದಿಗೆ ಸರಿಸಿ ಎತ್ತಿಕೊಂಡೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು.
ಬಳಿಕ ಟ್ವೀಟ್ ಮಾಡಿದ ನಿತಿನ್ ಗಡ್ಕರಿ, ಬಿಸಿಲಿನ ತಾಪದಿಂದ ತಮಗೆ ಸಮಸ್ಯೆ ಆಗಿತ್ತು ಎಂದಿದ್ದರು. ನಾನು ಆರೋಗ್ಯವಾಗಿದ್ದೇನೆ ಮತ್ತು ವರುದ್ನಲ್ಲಿ ನಡೆಯಲಿರುವ ಮುಂದಿನ ಚುನಾವಣಾ ಸಮಾವೇಶದಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದೇನೆ ಎಂದು ಹೇಳಿದರು.
‘ಮಹಾರಾಷ್ಟ್ರದ ಫುಸಾದ್ನಲ್ಲಿ ನಡೆದ ರ್ಯಾಲಿಯಲ್ಲಿ ಬಿಸಿಲಿನ ತಾಪದಿಂದ ನನಗೆ ಸಮಸ್ಯೆ ಅಗಿತ್ತು. ಆದರೆ ಈಗ ನಾನು ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ ಮತ್ತು ಮುಂದಿನ ಸಭೆಯಲ್ಲಿ ಭಾಗವಹಿಸಲು ವರುದ್ಗೆ ತೆರಳುತ್ತಿದ್ದೇನೆ. ನಿಮ್ಮ ಪ್ರೀತಿ ಮತ್ತು ಶುಭ ಹಾರೈಕೆಗಳಿಗೆ ಧನ್ಯವಾದಗಳು’ ಎಂದು ನಿತಿನ್ ಗಡ್ಕರಿ ಟ್ವೀಟ್ ಮಾಡಿದ್ದಾರೆ.
ಮೊದಲ ಹಂತದಲ್ಲಿ ಚುನಾವಣೆಗೆ ಹೋಗಿರುವ ನಾಗ್ಪುರದ ಬಿಜೆಪಿ ಅಭ್ಯರ್ಥಿ ಗಡ್ಕರಿ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ನಾಯಕ ರಾಜಶ್ರೀ ಪಾಟೀಲ್ ಅವರ ಪರ ಪ್ರಚಾರ ನಡೆಸುತ್ತಿದ್ದರು, ಅವರು ಯವತ್ಮಾಲ್-ವಾಶಿಮ್ ಲೋಕಸಭಾ ಕ್ಷೇತ್ರದಿಂದ ಆಡಳಿತಾರೂಢ ಮಹಾಯುತಿ ಮೈತ್ರಿಕೂಟದ ಅಭ್ಯರ್ಥಿಯಾಗಿದ್ದಾರೆ.
पुसद, महाराष्ट्र में रैली के दौरान गर्मी की वजह से असहज महसूस किया। लेकिन अब पूरी तरह से स्वस्थ हूँ और अगली सभा में सम्मिलित होने के लिए वरूड के लिए निकल रहा हूँ। आपके स्नेह और शुभकामनाओं के लिए धन्यवाद।
— Nitin Gadkari (मोदी का परिवार) (@nitin_gadkari) April 24, 2024
ಗಡ್ಕರಿ ಗುಣಮುಖರಾಗುವಂತೆ ಮಮತಾ ಬ್ಯಾನರ್ಜಿ ಹಾರೈಕೆ
ಇತ್ತ ನಿತಿನ್ ಗಡ್ಕರಿ ಗುಣಮುಖರಾಗುವಂತೆ ಮಮತಾ ಬ್ಯಾನರ್ಜಿ ಹಾರೈಸಿದ್ದಾರೆ. ಈ ಕುರಿತು ಟ್ವೀಟ್ ಮಡಿಉರ್ವ ಅವರು, ಹಿರಿಯ ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ನಿತಿನ್ ಗಡ್ಕರಿ ಶೀಘ್ರ ಮತ್ತು ಸಂಪೂರ್ಣ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ಈ ಕ್ರೂರ ಬೇಸಿಗೆಯ ಬಿಸಿಲಿನ ತಾಪದಲ್ಲಿ ಚುನಾವಣಾ ಪ್ರಚಾರವು ಅಸಹನೀಯವಾಗಿದೆ. ಇಂದು ಏಪ್ರಿಲ್ 24, ಮತ್ತು, ನಮ್ಮ 7-ಹಂತದ ಚುನಾವಣೆಗಳು ಜೂನ್ 1 ರವರೆಗೆ ಮುಂದುವರಿಯುತ್ತದೆ ಎಂದು ನೀವು ಊಹಿಸಬಲ್ಲಿರಾ?? ಎಂದು ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ. ಆ ಮೂಲಕ ಈ ಬಾರಿಯ ಚುನಾವಣೆ ಅತ್ಯಂತ ಸುದೀರ್ಘವಾಗಿದೆ ಎಂದು ಟೀಕಿಸಿದ್ದಾರೆ.