ದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿಯಾಗುವ ಆಸೆ ಪೂರೈಸಲು ಜೆಡಿಯು ನಾಯಕ ನಿತೀಶ್ಕುಮಾರ್ ಬಿಜೆಪಿಗೆ ದ್ರೋಹ ಬಗೆದರು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ.
ಬಿಹಾರದ ಪೂರ್ನಿಯಾದಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗಳಿಸಿದ ಸೀಟುಗಳ ಅರ್ಧದಷ್ಟು ಸ್ಥಾನಗಳು ಮಾತ್ರ ನಿತೀಶ್ಕುಮಾರ್ ಪಕ್ಷಕ್ಕೆ ಲಭಿಸಿತ್ತು. ಆದರೂ, ಬಿಹಾರದಲ್ಲಿ ಎನ್ಡಿಎಯು ತನ್ನ ನಾಯಕತ್ವದಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ನಿತೀಶ್ಕುಮಾರ್ ಭರವಸೆ ನೀಡಿದ್ದ ಕಾರಣ, ಅವರೇ ಮುಖ್ಯಮಂತ್ರಿಯಾಗಲು ಪ್ರಧಾನಿ ಮೋದಿ ಸಮ್ಮತಿಸಿದ್ದರು.
ನರೇಂದ್ರ ಮೋದಿ ಅವರ ಈ ತೆರ ಪ್ರೀತಿ ವಿಶ್ವಾಸ, ಪ್ರಾಮಾಣಿಕತೆ- ಆತ್ಮೀಯತೆ ಹೊರತೂ ನಿತೀಶ್ಕುಮಾರ್ ನಮಗೆ ದ್ರೋಹ ಮಾಡಿದರು. ಪ್ರಧಾನಿ ಪಟ್ಟದ ಮೇಲಿನ ಮೋಹ ಅವರನ್ನು ಎನ್ಡಿಎಯಿಂದ ದೂರ ಸರಿಯುವಂತೆ ಮಾಡಿತು ಮತ್ತು ಕಾಂಗ್ರೆಸ್ ಹಾಗೂ ಲಾಲೂ ಪ್ರಸಾದ್ ಯಾದವ್ ಜತೆ ಕೈಜೋಡಿಸುವಂತೆ ಮಾಡಿತು ಎಂದು ಅಮಿತ್ ಶಾ ಹೇಳಿದರು.
ಯಾವುದೇ ಬೆಲೆ ತೆತ್ತಾದರೂ ತಾನು ಪ್ರಧಾನಿಯಾಗಬೇಕು ಎಂಬುದೇ ನಿತೀಶ್ಕುಮಾರ್ ಗುರಿ. ಇವರ ಅಧಿಕಾರದಾಹ ಇದೀಗ ಜನರೆದುರು ಬಟಾಬಯಲಾಗಿದೆ. ಇನ್ನು ಯಾವ ಕಾರಣಕ್ಕೂ ಜನತೆ ಇವರನ್ನು ಬೆಂಬಲಿಸಲಾರರು ಮತ್ತು ಮುಂದಿನ ಚುನಾವಣೆಯಲ್ಲಿ ಬಿಹಾರದಲ್ಲಿ ಮೋದಿ ಅವರ ಕಮಲವೇ ಅರಳುವುದು ಎಂಬುದು ಜನರಿಗೆ ಸ್ಪಷ್ಟ ಗೊತ್ತು ಎಂದು ಸಚಿವ ಶಾ ಅಭಿಪ್ರಾಯಿಸಿದರು.