July 29, 2026
Wednesday, July 29, 2026
spot_img

ಇಂತಹ ಸ್ನೇಹಿತ ಯಾರಿಗೂ ಬೇಡ ಸ್ವಾಮೀ: ಮೀನು ತಿಂದಿದ್ದಕ್ಕೆ ಕೊಲೆಯೇ ಮಾಡಿಬಿಟ್ಟ ಭೂಪ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನನ್ನೇ ಹತ್ಯೆ ಮಾಡಿದ ಆಘಾತಕಾರಿ ಘಟನೆ ಮುಂಬೈನಲ್ಲಿ ಬೆಳಕಿಗೆ ಬಂದಿದೆ. ಬೇಯಿಸಿದ ಮೀನು ಕಾಣೆಯಾಗಿದ್ದ ವಿಚಾರಕ್ಕೆ ಇಬ್ಬರು ಸ್ನೇಹಿತರು ಸೇರಿ ಮತ್ತೊಬ್ಬ ಸ್ನೇಹಿತನನ್ನು ಕಲ್ಲಿನಿಂದ ಹೊಡೆದು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ವ್ಯಕ್ತಿಯನ್ನು ಅಫ್ಸರ್ ಎಂದು ಗುರುತಿಸಲಾಗಿದೆ. ಆತ ತನ್ನ ಸ್ನೇಹಿತರಾದ ಸುರೇಶ್ ಮತ್ತು ರಾಜೇಶ್ ರಮೇಶ್‌ನಾಥ್ ಜೊತೆಗೆ ಗೋರೆಗಾಂವ್ ಪ್ರದೇಶದಲ್ಲಿರುವ ಮನೆಯಲ್ಲಿ ವಾಸಿಸುತ್ತಿದ್ದನು. ಫೆಬ್ರವರಿ 24ರಂದು ಮೂವರು ಸೇರಿ ಮೀನು ಅಡುಗೆ ಮಾಡಿ ಮದ್ಯ ಸೇವಿಸಿದ ನಂತರ ನಿದ್ರೆಗೆ ಜಾರಿದ್ದರು.

ಇದನ್ನೂ ಓದಿ:

ಈ ನಡುವೆ ಪಾತ್ರೆಯಲ್ಲಿದ್ದ ಮೀನನ್ನು ಇಲಿಗಳು ತಿಂದು ಖಾಲಿ ಮಾಡಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಎದ್ದ ಸುರೇಶ್ ಮತ್ತು ರಾಜೇಶ್ ಪಾತ್ರೆಯಲ್ಲಿ ಮೀನಿಲ್ಲದಿರುವುದನ್ನು ನೋಡಿ, ಅದನ್ನು ಅಫ್ಸರ್ ತಿಂದಿದ್ದಾನೆ ಎಂದು ಅನುಮಾನಿಸಿ ಜಗಳ ಆರಂಭಿಸಿದ್ದಾರೆ. ಮಾತಿನ ಚಕಮಕಿ ತೀವ್ರಗೊಂಡಾಗ ಇಬ್ಬರು ಆರೋಪಿಗಳು ಕಲ್ಲಿನಿಂದ ಹೊಡೆದು ಅಫ್ಸರ್‌ನ್ನು ಹತ್ಯೆ ಮಾಡಿದ್ದಾರೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಘಟನೆ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡ ವನ್ರೈ ಪೊಲೀಸ್ ಠಾಣೆ ಪೊಲೀಸರು ತನಿಖೆ ನಡೆಸಿ ಇಬ್ಬರನ್ನೂ ಪತ್ತೆಹಚ್ಚಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !