ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಯಾವುದೇ ಗಡಿಯೂ ಸಂಕೀರ್ಣವಾಗಿ ಉಳಿಯುವುದಿಲ್ಲ. ಮುಕ್ತ ಮನಸ್ಸಿನಿಂದ ಚರ್ಚಿಸಿದರೆ ಯಾವುದೇ ಸಮಸ್ಯೆ ದೊಡ್ಡದಲ್ಲ ಎಂದು ನೇಪಾಳ ವಿದೇಶಾಂಗ ಸಚಿವ ಶಿಶಿರ್ ಖನಾಲ್ ಹೇಳಿದ್ದಾರೆ. ಈ ಮೂಲಕ ಭಾರತ ಮತ್ತು ನೇಪಾಳ ನಡುವಿನ ಗಡಿ ವಿವಾದವನ್ನು ರಾಜತಾಂತ್ರಿಕ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಭಾರತಕ್ಕೆ ಭೇಟಿ ನೀಡಿರುವ ಅವರು, ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದರು.
ಗಡಿ ವಿವಾದ ಶಾಂತಿಯುತ ಪರಿಹಾರ
ನಮ್ಮ ಮೂಲ ಉದ್ದೇಶ ನೇಪಾಳದ ಆರ್ಥಿಕ ಪರಿವರ್ತನೆ. ಅದಕ್ಕಾಗಿ ರಾಜಕೀಯ ಪ್ರದರ್ಶನ ಮಾಡುವ ಬದಲು, ಶಾಂತಿಯುತವಾಗಿ, ಮಾಹಿತಿಯ ಆಧಾರದ ಮೇಲೆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಬಯಸುತ್ತೇವೆ. ಇಂದು ನಾವು ನೇಪಾಳದಿಂದ ನಿಂತು ಗಡಿಯಾಚೆ ಕಂಡಾಗ ವೇಗವಾಗಿ ಬೆಳೆಯುತ್ತಿರುವ ಭಾರತವನ್ನು ಕಾಣುತ್ತೇವೆ. ಭಾರತವು ಇಂದು ಜಾಗತಿಕ ಮಟ್ಟದಲ್ಲಿ ತಾಂತ್ರಿಕ ಹಾಗೂ ಆರ್ಥಿಕ ಶಕ್ತಿಯಾಗಿ ತನ್ನನ್ನು ಯಶಸ್ವಿಯಾಗಿ ಮರುರೂಪಿಸಿಕೊಂಡಿದೆ ಎಂದು ಹೇಳಿದರು.
ಈ ಹೊಸ ಭಾರತದೊಂದಿಗೆ ಕೈಜೋಡಿಸಲು ನಾವು ಕೂಡ ಬಯಸುತ್ತೇವೆ. ಈ ಮೂಲಕ ನೇಪಾಳದ ಶಕ್ತಿ ಮತ್ತು ಉತ್ಸಾಹವನ್ನು ತರಲು ಬಯಸುತ್ತೇವೆ ಎಂದು ಶಿಶಿರ್ ಖನಾಲ್ ಹೇಳಿದ್ದಾರೆ.
ನೇಪಾಳದ ಪ್ರಗತಿ ನಮ್ಮ ಉದ್ದೇಶ
ನೇಪಾಳದಲ್ಲಿ ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡು ಹೆಚ್ಚು ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕ ಪ್ರಗತಿ ಸಾಧಿಸುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು. ಇದರ ಜೊತೆಗೆ ಉಭಯ ದೇಶಗಳು ವ್ಯಾಪಾರ, ಗಡಿ ಸಂಪರ್ಕ, ಇಂಧನ ಪಾಲುದಾರಿಕೆ ಕುರಿತು ಮಾತುಕತೆ ನಡೆಸಿದರು.



