ಹೊಸದಿಗಂತ ವರದಿ, ಹುಬ್ಬಳ್ಳಿ
ಉತ್ತರ ಕರ್ನಾಟಕ ಸ್ವಾಭಿಮಾನಿ ವೇದಿಕೆ ಸೇರಿದಂತೆ ಅನೇಕ ಸಂಘಟನೆ ಸಹಯೋಗದಲ್ಲಿ ಜಾತ್ಯಾತೀತ, ಧರ್ಮತೀತ ಮತ್ತು ಪಕ್ಷಾತೀತವಾಗಿ ಏ. 13 ರಂದು ಕೃಷ್ಣಾ ಮಹದಾಯಿ ನವಲಿ ಸಂಕಲ್ಪ ಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಟ್ಯಾಕ್ಟರ್ ಜಾಥಾ ನಡೆಸಲಾಗುವುದು ಎಂದು ಮಾಜಿ ಸಚಿವ ಮತ್ತು ಸಂಕಲ್ಪ ಯಾತ್ರೆಯ ಅಧ್ಯಕ್ಷ ಎಸ್.ಆರ್. ಪಾಟೀಲ ಹೇಳಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಗದಗ ಜಿಲ್ಲೆಯ ನರಗುಂದ ತಾಲೂಕಿನಿಂದ ಟ್ಯಾಕ್ಟರ್ ಜಾಥ ಆರಂಭವಾಗಲಿದೆ. ಶಿರಹಟ್ಟಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಅವರು ಜಾಥಾ ಉದ್ಘಾಟನೆ ಮಾಡುವರು ಎಂದರು.
ನರಗುಂದ ಆರಂಭವಾದ ಜಾಥಾ ಕೊಣ್ಣೂರ, ಹೊಳೆಆಲೂರ, ಬಾದಾಮಿ, ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬಾಡಗಂಡಿಗ ತಲುಪಿ ಬಾಪೂಜಿ ಅಂತರ ರಾಷ್ಟ್ರೀಯ ಶಾಲೆಯ ಮೈದಾನದಲ್ಲಿ ಎ. 17 ರಂದು ಬೃಹತ್ ಸಮಾವೇಶ ಮತ್ತು ಸಮಾರೋಪ ಸಮಾರಂಭ ನೆರವೇರಲಿದೆ ಎಂದರು.
ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿಗಾಗಿ ಈ ಹೋರಾಟ ಮಾಡಲಾಗುತ್ತಿದೆ. ಈ ನೀರಾವರಿ ಯೋಜನೆಯಿಂದ 7 ಜಿಲ್ಲೆಯ 15 ಲಕ್ಷ ನೀರಾವರಿ ಯಾದರೆ ಉತ್ತರ ಕರ್ನಾಟಕ ಭಾಗ್ಯದ ಬಾಗಿಲು ತೆರೆದಂತಾಗುತ್ತದೆ. ಆದರಿಂದ ಸರ್ಕಾರಕ್ಕೆ ಈಗ ಒತ್ತಾಯಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ