ಹೊಸ ದಿಗಂತ ವರದಿ, ಅಂಕೋಲಾ:
ಮುಂಬರುವ ವಿಧಾನಸಭಾ ಚುನಾವಣೆಯ ಸ್ಪರ್ಧಾ ಕಣದಲ್ಲಿ ಇರುವುದಿಲ್ಲ ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ್ ಅವರು ಸಾಮಾಜಿಕ ಜಾಲ ತಾಣಗಳಲ್ಲಿ ಹೇಳಿಕೆ ನೀಡುವ ಮೂಲಕ ಸ್ಪಷ್ಟಪಡಿಸಿದ್ದಾರೆ.
ಖಾಸಗಿ ವಾಹಿನಿಗಳು ನಡೆಸುತ್ತಿರುವ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ತಮ್ಮ ಹೆಸರು ಪರಿಗಣಿಸದಂತೆ ಮನವಿ ಮಾಡಿರುವ ಅವರು ಈ ಮೂಲಕ ಅಭಿಮಾನಿಗಳಲ್ಲಿ ಇರುವ ಗೊಂದಲಕ್ಕೆ ತೆರೆ ಎಳೆಯಲು ಬಯಸುವುದಾಗಿ ತಿಳಿಸಿದ್ದಾರೆ.
ಯಾರನ್ನು ಆಯ್ಕೆ ಮಾಡಬೇಕು ಎಂಬುದು ಮತದಾರರ ವಿವೇಚನೆಗೆ ಬಿಟ್ಟ ವಿಚಾರ ಎಂದ ಅವರು, ಕ್ಷೇತ್ರದ ಅಭಿವೃದ್ಧಿ ಕುರಿತು ಮುಂದಾಲೋಚನೆ ಇರುವ ಪ್ರತಿಯೊಂದು ಸಮಾಜಕ್ಕೂ ನ್ಯಾಯ ಒದಗಿಸಬಲ್ಲ ಎಲ್ಲರನ್ನೂ ಒಗ್ಗೂಡಿಸಿ ಕ್ಷೇತ್ರವನ್ನು ಮುನ್ನಡೆಸಬಲ್ಲವರು ಕ್ಷೇತ್ರದ ಶಾಸಕರಾಗಬೇಕು ಎಂಬುದು ತಮ್ಮ ಅಭಿಪ್ರಾಯ ಎಂದು ತಿಳಿಸಿದ್ದಾರೆ.
ಕ್ಷೇತ್ರದ ಅತ್ಯಂತ ಹಿಂದುಳಿದ ಬುಡಕಟ್ಟು ಹಾಲಕ್ಕಿ, ಕುಣಬಿ ಜನಾಂಗದವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಜವಾಬ್ದಾರಿ ಬಹಳ ದೊಡ್ಡ ಜವಾಬ್ದಾರಿ ಈ ಕ್ಷೇತ್ರದ ಪ್ರತಿನಿಧಿಗೆ ಇದೆ.
ತಮ್ಮ ಅವಧಿಯಲ್ಲಿ ಹಾಲಕ್ಕಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕುರಿತು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು ಆದರೆ ಅದು ತಿರಸ್ಕೃತಗೊಂಡಿದೆ ಮುಂದಿನ ದಿನಗಳಲ್ಲಿ ಹಾಲಕ್ಕಿ ಸಮಾಜ ಸೇರಿದಂತೆ ಪ್ರತಿಯೊಂದು ಜನಾಂಗಕ್ಕೂ ನ್ಯಾಯ ಒದಗಿಸಲು ಶಾಸಕರು ಬದ್ಧರಾಗಿರಬೇಕು ಎಂದು ಆನಂದ್ ಅಸ್ನೋಟಿಕರ್ ತಿಳಿಸಿದ್ದು ಬರಲಿರುವ ವಿಧಾನಸಭಾ
ಚುನಾವಣೆ ಸ್ಪರ್ಧೆಯಲ್ಲಿ ತಾವು ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.