ಹೊಸ ದಿಗಂತ ವರದಿ, ವಿಜಯಪುರ:
ಕೆ.ಎಸ್. ಈಶ್ವರಪ್ಪ ಅವರನ್ನು ಜೈಲ್ಗೆ ಹಾಕೋದಲ್ಲ. ಮೊದಲು ಡಿ.ಕೆ. ಶಿವಕುಮಾರಗೆ ಜೈಲಿಗೆ ಹಾಕಬೇಕು ಎಂದು ನಗರ ಶಾಸಕ ಬಸವನಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದರು.
ನಗರ ಹೊರ ವಲಯ ತೊರವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಡಿಕೆಶಿಗೆ ಪೊಲೀಸರು ಹಾಕಿದ ಬ್ಯಾರಿಕೇಡ್ ಹಾರುವಷ್ಟು ಶಕ್ತಿ ಇದೆ. ಅದೇ ದೆಹಲಿಯಲ್ಲಿ ನಿಮ್ಮನ್ನ ಜೈಲಗೆ ಹಾಕಿದಾಗ ಬಿಪಿ, ಶುಗರ್ ಹೆಚ್ಚಾಗಿದೆ ಅಂತೆ ಹೇಳ್ತಿದ್ದಿರಿ ಎಂದು ಡಿಕೆಶಿಯ ಕಾಲೆಳೆದರು.
ಇನ್ನು ನೀವು ಬ್ಯಾರಿಕೇಡ್ ಜಿಗಿತಿರಿ ಅಂದ್ರೆ ನೀವು ಫಿಟ್ ಆಗಿದ್ದಿರಿ ಅಂತಾ ಅರ್ಥ. ಹೀಗಾಗಿ ನೀವು ಆರೋಗ್ಯಕರವಾಗಿ ಇದ್ದಿರಿ. ಆರೋಗ್ಯ ಸಮಸ್ಯೆ ಹೇಳಿ ಜೇಲ್ ನಿಂದ ಹೊರಗೆ ಬಂದಿದ್ದಿರಿ. ಇದನ್ನ ಕೋರ್ಟ್ ಕೂಡ ಗಮನಿಸಿ, ಪರಿಗಣಿಸಿ ಮತ್ತೆ ಜೇಲ್ ಗೆ ಡಿಕೆಶಿಯನ್ನು ಕಳಿಸಬೇಕು ಎಂದು ಒತ್ತಾಯಿಸಿದರು.
ಜಾರಕಿಹೊಳಿ ಸಿಡಿ ಹಾಗೂ ಸಂತೋಷ ಆತ್ಮಹತ್ಯೆ ಕೇಸ್ನಲ್ಲಿ ಮಹಾನಾಯಕನ ಬಗ್ಗೆ ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದು ಸತ್ಯ ಇದೆ ಎಂದರು.
ನಮ್ಮ ಬಿಜೆಪಿಯಲ್ಲಿರುವ ಓರ್ವ ಯುವ ನಾಯಕ ಹಾಗೂ ಕಾಂಗ್ರೆಸ್ನ ಮಹಾನಾಯಕ ಸೇರಿ ಈ ಕುತಂತ್ರ ಹೆಣದಿದ್ದಾರೆ ಎಂದು ಕಿಡಿಕಾರಿದರು.
ಅಲ್ಲದೇ, ಬಿಜೆಪಿಯಲ್ಲೂ ಒಂದು ಟೀಮ್ ಇದೆ. ಕಾಂಗ್ರೆಸ್ ನಲ್ಲು ಒಂದು ಟೀಮ್ ಇದೆ. ಮಹಾಕಳ್ಳ ನಮ್ಮಲ್ಲಿರುವ ಕಳ್ಳ ಸೇರಿ ಇಂತಹ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಎರಡು ಸಿಡಿ ಕಾರ್ಖಾನೆಗಳು ಇದಾವೆ. ಅವರಿಬ್ಬರು ಸೇರಿ ಇದನ್ನ ಮಾಡಿದ್ದಾರೆ ಎಂದು ವಾಗ್ದಾಳಿ ಮಾಡಿದರು.