ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಮುಖ್ಯಸ್ಥ ಅಧೀರ್ ರಂಜನ್ ಚೌಧರಿ ಅವರು ಬುಧವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ‘ಪಗ್ಲಾ ಮೋದಿ’ (ಹುಚ್ಚ ಮೋದಿ) ಎಂದು ಹೇಳುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದಾರೆ.
ಆರ್ಬಿಐ ಈಗಾಗಲೇ 2 ಸಾವಿರ ರೂಪಾಯಿ ನೋಟುಗಳನ್ನು ಹಿಂತೆಗೆದುಕೊಳ್ಳುವ ನಿರ್ಧಾರ ಮಾಡಿದೆ. ಈ ಕುರಿತಾಗಿ ಪ್ರತಿಕ್ರಿಯೆ ನೀಡಿದ ಅಧೀರ್ ರಂಜನ್ ಚೌಧರಿ, ‘ಅವರು ಕೇವಲ ಮೋದಿಯಲ್ಲ ಪಗ್ಲಾ ಮೋದಿ (ಹುಚ್ಚ ಮೋದಿ), ಜನರು ಅವರನ್ನು ಪಗ್ಲಾ ಮೋದಿ ಎಂದೇ ಕರೆಯುತ್ಥಾರೆ’ ಎಂದಿದ್ದರು.
ಇತ್ತ ತಮ್ಮ ಹೇಳಿಕೆ ವಿವಾದವಾಗುವುದನ್ನು ಅರಿತ ಬೆನ್ನಲ್ಲೇ ಅಧೀರ್ ರಂಜನ್ ಚೌಧರಿ ಸ್ಪಷ್ಟನೆ ನೀಡಿದ್ದು, ನಾನು ಸಾರ್ವಜನಿಕರಲ್ಲಿ 2 ಸಾವಿರ ರೂಪಾಯಿ ನೋಟು ಹಿಂತೆಗೆದುಕೊಳ್ಳುವ ನಿರ್ಧಾರಕ್ಕೆ ಯಾವ ಭಾವನೆ ಇದೆ ಅನ್ನೋದನ್ನು ಮಾತ್ರವೇ ಪ್ರತಿನಿಧಿಸುತ್ತಿದ್ದೆ. ಅದರ ಹೊರತಾಗಿ ಬೇರೆ ಯಾವ ಉದ್ದೇಶವಿರಲಿಲ್ಲ ಎಂದು ಹೇಳಿದ್ದಾರೆ.
ಇನ್ನು ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವೆ ನಡೆದ ಸಭೆಯ ಕುರಿತು ಪ್ರತಿಕ್ರಿಯಿಸಿದ ಚೌಧರಿ,ಭಾರತದ ಜನರಲ್ಲಿ ಮೋದಿ ಬಗ್ಗೆ ಹತಾಶೆ ಹೆಚ್ಚುತ್ತಿದೆ. ಜನರು ಮೋದಿಯನ್ನು ‘ಪಾಗಲ್’ ಎಂದು ಕರೆಯುತ್ತಿದ್ದಾರೆ. ಸಾರ್ವಜನಿಕ ಭಾವನೆಗಳು ಮೋದಿ ವಿರುದ್ಧ ತಿರುಗಿಬಿದ್ದು, ಎಎಪಿ ಮತ್ತು ಟಿಎಂಸಿಯಂತಹ ಪಕ್ಷಗಳು ಪ್ರಸ್ತುತತೆಯನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿವೆ’ ಎಂದು ಹೇಳಿದ್ದರು.
ಅಧೀರ್ ರಂಜನ್ ಚೌಧರಿ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲವಾಗಿದ್ದು, ಕ್ಷಮೆ ಯಾಚಿಸಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ.