ಹೊಸದಿಗಂತ ಡಿಜಿಟಲ್ ಡೆಸ್ಕ್:
ದಿವಂಗತ ನಟ, ಮಾಜಿ ಮುಖ್ಯಮಂತ್ರಿ ಎನ್ಟಿ ರಾಮರಾವ್ ಅವರ ನಾಲ್ಕನೇ ಪುತ್ರಿ ಕಾಂತಮನೇನಿ ಉಮಾಮಹೇಶ್ವರಿ ಆತ್ಮಹತ್ಯೆಗೆ ಒಳಗಾಗಿದ್ದಾರೆ. ಜ್ಯೂಬ್ಲಿ ಹಿಲ್ಸ್ನಲ್ಲಿರುವ ತಮ್ಮ ನಿವಾಸದಲ್ಲಿ ಫ್ಯಾನ್ಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಮಾನಸಿಕ ಒತ್ತಡ ಹಾಗೂ ಆರೋಗ್ಯ ಸಮಸ್ಯೆಯಿಂದ ಉಮಾಮಹೇಶ್ವರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕುಟುಂಬಸ್ಥರು ಸ್ಪಷ್ಟಪಡಿಸಿದ್ದು, ಎನ್ಟಿಆರ್ ಕುಟುಂಬದಲ್ಲಿ ತೀವ್ರ ವಿಷಾದ ವ್ಯಕ್ತವಾಗಿದೆ.
ಉಸ್ಮಾನಿಯಾ ಆಸ್ಪತ್ರೆಯಲ್ಲಿ ಉಮಾಮಹೇಶ್ವರಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಇನ್ನು ಉಮಾಮಹೇಶ್ವರಿ ಅವರ ಅಂತಿಮ ಸಂಸ್ಕಾರ ಬುಧವಾರ ನಡೆಯಲಿದ್ದು, ಅಮೆರಿಕದಲ್ಲಿರುವ ಆಕೆಯ ಹಿರಿಯ ಮಗಳು ಆಗಮನದ ನಂತರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಉಮಾ ಮಹೇಶ್ವರಿ ಆತ್ಮಹತ್ಯೆ ಮಾಡಿಕೊಂಡಾಗ ಮನೆಯಲ್ಲಿ ನಾಲ್ಕು ಮಂದಿ ಮಾತ್ರ ಇದ್ದುದಾಗಿ ಕಿರಿಯ ಪುತ್ರಿ ದೀಕ್ಷಿತಾ ಹೇಳಿಕೆ ನೀಡಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಕೋಣೆಗೆ ಹೋದ ನನ್ನ ತಾಯಿ ಊಟದ ಸಮಯ ಆದರೂ ಹೊರಗೆ ಬರಲಿಲ್ಲ. ನಾವು ಎಷ್ಟೇ ಬಾಗಿಲು ತಟ್ಟಿದರೂ ತೆಗೆಯದ ಕಾರಣ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ವಿ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.