ಹೊಸದಿಗಂತ ಡಿಜಿಟಲ್ ಡೆಸ್ಕ್
ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಸೈ ಎಂಬಲ್ಲಿ ಶನಿವಾರ ಟಿವಿ ದಾರಾವಾಹಿ ಸೆಟ್ನಲ್ಲಿ 21 ವರ್ಷದ ನಟಿ ತುನಿಶಾ ಶರ್ಮಾ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿತ್ತು. ತುನಿಶಾ ಆತ್ಮಹತ್ಯೆಗೆ ಲವ್ ಜಿಹಾದ್ ಕಾರಣವಾಗಿರಬಹುದು ಎಂದು ಬಿಜೆಪಿ ಶಾಸಕ ರಾಮ್ ಕದಮ್ ಗಂಭೀರ ಆರೋಪ ಮಾಡಿದ್ದಾರೆ.
ತುನಿಶಾ ಆತ್ಮಹತ್ಯೆಗೆ ಪ್ರಚೋದಿಸಿದ ಸಂಬಂಧ ದೂರಿನನ್ವಯ ‘ಅಲಿ ಬಾಬಾ: ದಸ್ತಾನ್-ಎ-ಕಾಬೂಲ್’ ಟಿವಿ ಶೋನ ಆಕೆಯ ಸಹ-ನಟ ಶೀಜಾನ್ ಮೊಹಮ್ಮದ್ ಖಾನ್ ನನ್ನು ಪೊಲೀಸರು ಈಗಾಗಲೆ ಬಂಧಿಸಿದ್ದಾರೆ. ತುನಿಶಾ ಹಾಗೂ ಶಿಜಾನ್ ಖಾನ್ ಪ್ರೀತಿಸುತ್ತಿದ್ದರು ಎನ್ನಲಾಗಿದ್ದು, 15 ದಿನಗಳ ಹಿಂದೆ ಇವರ ಸಂಬಂಧ ಮುರಿದುಬಿದ್ದಿತ್ತು. ಪ್ರೇಮವೈಫಲ್ಯದಿಂದ ನೊಂದಿದ್ದ ತುನಿಶಾ ಆತ್ಮಹತ್ಯೆ ನಿರ್ಧಾರ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಪ್ರಕರಣವನ್ನು ಕೂಲಂಕಷವಾಗಿ ತನಿಖೆ ಮಾಡಲಾಗುವುದು ಮತ್ತು ಎಲ್ಲಾ ಕೋನಗಳನ್ನು ಪರಿಶೀಲಿಸಲಾಗುವುದು ಎಂದು ರಾಮ್ ಕದಮ್ ಹೇಳಿದ್ದಾರೆ. ಪ್ರಕರಣದಲ್ಲಿ ತಪ್ಪಿತಸ್ಥರನ್ನು ಶಿಕ್ಷಿಸದೆ ಬಿಡಲಾಗುವುದಿಲ್ಲ. ತುನಿಶಾ ಶರ್ಮಾ ಅವರ ಕುಟುಂಬಕ್ಕೆ ನ್ಯಾಯ ಸಿಗುತ್ತದೆ ಎಂದು ರಾಮ್ ಭರವಸೆ ನೀಡಿದ್ದಾರೆ. ಇದು ಲವ್ ಜಿಹಾದ್ ಪ್ರಕರಣವಾಗಿದ್ದರೆ ಇದರ ಹಿಂದೆ ಯಾವ ಸಂಘಟನೆಗಳು ಮತ್ತು ಸಂಚುಕೋರರು ಇದ್ದಾರೆ ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅವರು ಹೇಳಿದರು.
ಮುಂಬೈನ ವಸಾಯಿ ನ್ಯಾಯಾಲಯವು ಇಂದು ಮಧ್ಯಾಹ್ನ ಶೀಜಾನ್ ಮೊಹಮ್ಮದ್ ಖಾನ್ ಅವರನ್ನು ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ. ನ್ಯಾಯಾಲಯದಲ್ಲಿ, ಖಾನ್ ಅವರ ವಕೀಲ ಶರದ್ ರೈ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, “ಏನೇ ನಡೆದರೂ ಪೊಲೀಸರು ಮತ್ತು ನ್ಯಾಯಾಲಯವು ಕೆಲಸ ಮಾಡುತ್ತಿದೆ. ಅವರನ್ನು (ಶೀಜಾನ್ ಖಾನ್) ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅವರ ವಿರುದ್ಧದ ಆರೋಪಗಳು ಆಧಾರರಹಿತವಾಗಿವೆ” ಎಂದು ಹೇಳಿದ್ದಾರೆ.
20 ವರ್ಷ ವಯಸ್ಸಿನ ನಟಿ ತುನಿಶಾ ಶೂಟಿಂಗ್ ವೇಳೆ ಚಹಾ ವಿರಾಮದ ನಂತರ ಶೂಟಿಂಗ್ ಸೆಟ್ ನಲ್ಲೇ ವಾಶ್ರೂಮ್ನಲ್ಲಿ ನೇಣಿಗೆ ಶರಣಾಗಿದ್ದರು. ಎಷ್ಟೋ ಹೊತ್ತಾದರೂ ಆಕೆ ಹೊರಗೆ ಬರದ ಹಿನ್ನೆಲೆಯಲ್ಲಿ ಬಾಗಿಲು ಒಡೆದು ನೋಡಿದಾಗ ಆಕೆ ಮೃತಪಟ್ಟಿದ್ದು ತಿಳಿದುಬಂದಿತ್ತು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ