ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೀನು ಸಾಗಿಸುತ್ತಿದ್ದ ಲಾರಿಗೆ ಹಿಂದಿನಿಂದ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವ ದುರಂತ ಘಟನೆ ಮಂಗಳೂರಿನಲ್ಲಿ ಇಂದು ನಡೆದಿದೆ.
ನಗರದ ರಾ.ಹೆ.66ರ ನೇತ್ರಾವತಿ ಸೇತುವೆಯಲ್ಲಿ ಇಂದು ಮುಂಜಾನೆ ಈ ಘಟನೆ ನಡೆದಿದೆ. ಮೃತ ಸವಾರನನ್ನು ಮೂಲತಃ ಉಳ್ಳಾಲ ನಿವಾಸಿ ಪ್ರಸಕ್ತ ಕೋಟೆಕಾರ್ನಲ್ಲಿ ನೆಲೆಸಿರುವ ಹನೀಫ್ ಎಂಬುವರ ಪುತ್ರ ಅಝ್ವೀನ್ (21) ಎಂದು ಗುರುತಿಸಲಾಗಿದೆ.
ಅಝ್ವೀನ್ ಇಂದು ಬೆಳಗ್ಗೆ 3:30ಕ್ಕೆ ತೊಕ್ಕೊಟ್ಟಿನಿಂದ ಮಂಗಳೂರು ಕಡೆಗೆ ಸ್ಕೂಟರ್ ನಲ್ಲಿ ತೆರಳುತ್ತಿದ್ದ. ಈ ವೇಳೆ ನೇತ್ರಾವತಿ ಸೇತುವೆಯ ಬಳಿ ಮುಂಭಾಗದಲ್ಲಿ ಚಲಿಸುತ್ತಿದ್ದ ಮೀನು ಸಾಗಿಸುತ್ತಿದ್ದ ಲಾರಿಯ ಚಾಲಕ ಹಠಾತ್ ಬ್ರೇಕ್ ಹಾಕಿದ್ದಾನೆ. ಆಗ ಲಾರಿ ಹಿಂಭಾಗದಲ್ಲಿ ಸ್ಕೂಟರ್ ನಲ್ಲಿ ಚಲಿಸುತ್ತಿದ್ದ ಅಝ್ವೀನ್ ನಿಯಂತ್ರಣ ಕಳೆದುಕೊಂಡು ಲಾರಿಗೆ ಡಿಕ್ಕಿ ಹೊಡೆದಿದ್ದಾನೆ.
ಗಂಭೀರ ಗಾಯಗೊಂಡಿದ್ದ ಅಝ್ವೀನ್ ಅನ್ನು ಸಮೀಪದ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.