ದಿಗಂತ ವರದಿ ಹುಬ್ಬಳ್ಳಿ:
ಕೆಎಲ್ಇ ಸಂಸ್ಥೆಯ ಶ್ರೀ ಜಗದ್ಗುರು ಮೂರುಸಾವಿರಮಠ ವಾಣಿಜ್ಯ ಕಾಲೇಜಿನ ರಾಷ್ಟ್ರೀಯ ಸೇವಾ ಸಂಘದಿಂದ ಒಂದು ಮುಷ್ಟಿ ಅಕ್ಕಿ ಎಂಬ ಅಭಿಯಾನದಡಿ ಕೊರೋನಾ ಸಂಕಷ್ಟದಲ್ಲಿರುವವರಿಗೆ ನೀಡಲು ಅಕ್ಕಿ ಸಂಗ್ರಹಿಸಿ ಬಡವರಿಗೆ ನೀಡಲಾಗುತ್ತದೆ ಎಂದು ಕಾಲೇಜಿನ ಪ್ರಾಚಾರ್ಯ ಡಿ.ವಿ. ಹೊನಗಣ್ಣವರ ಹೇಳಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಲೇಜಿನ ವಿದ್ಯಾರ್ಥಿಗಳು ವಿದ್ಯಾಭ್ಯಾಸ, ಕ್ರೀಡೆ ಮತ್ತು ಸಂಸ್ಕೃತಿ ಸ್ಪರ್ಧೆಗಳಲ್ಲಿ ಸಾಧನೆ ಮಾಡಿದ್ದಾರೆ. ಅದರಂತೆ ವಿದ್ಯಾರ್ಥಿಗಳಿಗೆ ಸೇವಾ ಮನೋಭಾವನೆ ಬೆಳೆಸುವ ಉದ್ದೇಶದಿಂದ ಎನ್ ಎಸ್ಎಸ್ ನಿಂದ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಈ ವರ್ಷ ವಿದ್ಯಾರ್ಥಿಗಳು ಒಂದು ಮುಷ್ಟಿ ಅಕ್ಕಿ ಎಂಬ ಅಭಿಯಾನ ಆರಂಭಿಸಿ ಬಡವರಿಗೆ ಸಹಾಯ ಮಾಡುತ್ತಿದ್ದಾರೆ ಎಂದರು.
ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಡಾ. ವಿ.ಎಸ್. ಕಟ್ಟಿಮಟ್ಟ ಮಾತನಾಡಿ,ಕಾಲೇಜಿನ ವಿದ್ಯಾರ್ಥಿಗಳು ವಿನೂತನವಾಗಿ ಏಕ್ ಮುಟ್ಟಿ ಚಾವಲ್ ಎಂಬ ಅಭಿಯಾನ ಆರಂಭಿಸಿದ್ದು, ಇಲ್ಲಿಯವರೆಗ ೨೦೦ ಕ್ಕೂ ಹೆಚ್ಚು ೨೫ ಕೆಜಿಯ ಪ್ಯಾಕೆಟ್ ಗಳನ್ನು ಹಳೆ ವಿದ್ಯಾರ್ಥಿಗಳು ಮತ್ತು ಈಗೀನ ವಿದ್ಯಾರ್ಥಿಗಳು ನೀಡಿದ್ದು ಎಲ್ಲವನ್ನು ಕಾಲೆಜಿನಲ್ಲಿ ಸಂಗ್ರಹಿಸಲಾಗಿದೆ ಎಂದರು.
ಸಂಗ್ರಹವಾದ ಎಲ್ಲ ಅಕ್ಕಿ ಪ್ಯಾಕೆಟ್ ಗಳನ್ನು ಸಿದ್ಧಾರೂಢ ಮಠ, ಮೂರುಸಾವಿರ ಮಠ,ಸಾಯಿ ಮಂದಿರ, ಮೂರಘಾಮಠ, ನಗರದ ಎಲ್ಲ ವೃದ್ಧಾಶ್ರಮ, ಅನಾಥಾಶ್ರಮ, ನಿರಾಶ್ರಿತರಿಗೆ ಮತ್ತು ಬಡವರಿಗೆ ನೀಡಲಾಗುತ್ತದೆ ಎಂದು ತಿಳಿಸಿದರು.