ಹೊಸ ದಿಗಂತ ವರದಿ , ವಿಜಯಪುರ:
ಆನ್ಲೈನ್ ಮೂಲಕ ಯುವಕನಿಂದ 40 ಲಕ್ಷ ರೂ. ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಎಚ್.ಡಿ. ಆನಂದಕುಮಾರ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಾಸನ ಜಿಲ್ಲೆಯ ಮಂಜುಳಾ ಕೆ.ಆರ್. (30) ಬಂಧಿತ ಆರೋಪಿಯಾಗಿದ್ದು, ಈಕೆಯ ಗಂಡ ಸ್ವಾಮಿ ಬಸವರಾಜು ಪರಾರಿಯಾಗಿದ್ದಾನೆ. ಈತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದರು.
ಜಿಲ್ಲೆಯ ಸಿಂದಗಿ ತಾಲೂಕಿನ ಬಗಲೂರಿನ ಪರಮೇಶ್ವರ ಹಿಪ್ಪರಗಿ ಎಂಬವರಿಂದ, ಮಂಜುಳಾ ಕೆ.ಆರ್. ಮಹಿಳೆ ತಾನು ಐಎಎಸ್ ಓದುತ್ತಿದ್ದು, ಇನ್ನೇನು ಕೆಲ ದಿನಗಳಲ್ಲಿ ಜಿಲ್ಲಾಧಿಕಾರಿಯಾಗುತ್ತೇನೆ ಎಂದು ನಂಬಿಸಿ, ಅಲ್ಲದೆ ಪರಮೇಶ್ವರ ಹಿಪ್ಪರಗಿಯ ಸ್ನಾನ ಮಾಡುವ ಖಾಸಗಿ ಫೋಟೊ ಬಳಸಿಕೊಂಡು, ಹನಿಟ್ರ್ಯಾಪ್ ಕೂಡ ಮಾಡಿದ್ದು, 40 ಲಕ್ಷ ರೂ.ಗಳನ್ನು ವಂಚಿಸಲಾಗಿದೆ. ಹೀಗಾಗಿ 40 ಲಕ್ಷ ಹಣದಲ್ಲಿ 4.64 ನಗದು, ಮೊಬೈಲ್, ಕಾರು ಸೇರಿದಂತೆ 6.64 ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದ್ದು, ಕಾನೂನು ಕ್ರಮ ಕೈಗೊಳ್ಳಾಗಿದೆ ಎಂದರು.
ಇದರೊಂದಿಗೆ ಜಿಲ್ಲೆಯಲ್ಲಿ ಆನ್ಲೈನ್ ಮೂಲಕ ಕಳೆದ ಮೂರು ತಿಂಗಳಲ್ಲಿ 27 ವಂಚನೆ ಪ್ರಕರಣಗಳು ದಾಖಲಾಗಿದ್ದು, ಇವುಗಳನ್ನು ಭೇದಿಸಲಾಗಿದೆ. 27 ಕೇಸ್ಗಳಲ್ಲಿ 40.91 ಲಕ್ಷ ವಂಚನೆ ಮಾಡಲಾಗಿತ್ತು. ಇದರಲ್ಲಿ 32.32 ಲಕ್ಷ ನಗದನ್ನು ನೊಂದ ದೂರುದಾರರಿಗೆ ನೀಡಲಾಗಿದೆ. ಹೀಗಾಗಿ ಸಾರ್ವಜನಿಕರು ಆನ್ಲೈನ್ ಮೂಲಕ ವಂಚನೆ ಆಗದಂತೆ ಎಚ್ಚರ ವಹಿಸಬೇಕು ಎಂದರು.