ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಜಾಬ್ ನ ಪೋಲೀಸ್ ಗುಪ್ತಚರ ಕೇಂದ್ರ ಕಛೇರಿಯ ಮೇಲೆ ನಡೆದ ದಾಳಿಯ ಹಿಂದೆ ಪಾಕಿಸ್ಥಾನದಲ್ಲಿ ನೆಲೆಸಿರುವ ಭಯೋತ್ಪಾದಕ ಹರ್ವಿಂದರ್ ಸಿಂಗ್ ಅಲಿಯಾಸ್ ರಿಂಡಾನ ಕೈವಾಡವಿದೆ ಎಂಬುದನ್ನು ಪ್ರಾಥಮಿಕ ತನಿಖೆ ಬಹಿರಂಗ ಪಡಿಸಿದೆ.
ಮೂಲಗಳು ವರದಿ ಮಾಡಿರುವ ಪ್ರಕಾರ ಪಾಕಿಸ್ಥಾನದಲ್ಲಿ ನೆಲೆಸಿರುವ ರಿಂಡಾ ಭಾರತದ ವಿರುದ್ಧ ಭಯೋತ್ಪಾದಕ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದ್ದು ಮೊಹಾಲಿಯ ದಾಳಿಯಲ್ಲಿ ಆತನ ಕೈವಾಡ ಇದೆ ಎಂಬುದನ್ನು ಪೋಲೀಸ್ ಮೂಲಗಳು ದೃಢಪಡಿಸಿವೆ.
ಈ ಕುರಿತು ಪಂಜಾಬ್ ಸಿಎಂ ಭಗವಂತ್ ಮಾನ್ ಪ್ರತಿಕ್ರಿಯಿಸಿದ್ದು “ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಕೆಲವರನ್ನು ಬಂಧಿಸಲಾಗಿದೆ. ಇನ್ನೂ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಪಂಜಾಬ್ ನಲ್ಲಿ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವ ಯಾರನ್ನೂ ಬಿಡುವ ಮಾತಿಲ್ಲ” ಎಂದು ಹೇಳಿದ್ಧಾರೆ.
ದಾಳಿಗೆ ಸಂಬಂಧಿಸಿದಂತೆ ಅಂಬಾಲಾದ ಶಂಕಿತ ವ್ಯಕ್ತಿ ಸೇರಿದಂತೆ 20 ಕ್ಕೂ ಹೆಚ್ಚು ಜನರನ್ನು ಇಲ್ಲಿಯವರೆಗೆ ಬಂಧಿಸಲಾಗಿದೆ . ಅವರಲ್ಲಿ ಕೆಲವರು ದಾಳಿಗೆ ಸಹಾಯ ಒದಗಿಸಿದ್ದಾರೆ ಎಂದು ನಂಬಲಾಗಿದೆ, ಆರೋಪಿಗಳನ್ನು ಬಂಧಿಸಲು ಹತ್ತು ತಂಡಗಳನ್ನು ರಚಿಸಲಾಗಿದೆ ಎಂದು ಪೋಲೀಸ್ ಮೂಲಗಳು ತಿಳಿಸಿವೆ.