ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ಕರಾವಳಿ ಭಾಗವಾದ ಪಾಲ್ಘರ್ ಜಿಲ್ಲೆಯಲ್ಲಿ ಸುರಿದ ರಾತ್ರಿಡೀ ಧಾರಾಕಾರ ಮಳೆಯಿಂದಾಗಿ ನೆರೆ ಪರಿಸ್ಥಿತಿ ತೀವ್ರಗೊಂಡಿದೆ. ವಿಶೆಷವಾಗಿ ದಹನು ಹಾಗೂ ತಲಸರಿ ತಾಲೂಕಿನ ಅನೇಕ ಗ್ರಾಮಗಳು ಸಂಪೂರ್ಣವಾಗಿ ನೀರು ಪಾಲಾಗಿದ್ದು, ದ್ವೀಪಗಳಂತೆ ಮಾರ್ಪಟ್ಟಿವೆ. ಇದರಿಂದಾಗಿ ಈ ಭಾಗದ ಸಾರಿಗೆ ಮತ್ತು ಸಂಪರ್ಕ ಜಾಲ ತೀವ್ರವಾಗಿ ಅಸ್ತವ್ಯಸ್ತಗೊಂಡಿದೆ.
891 ಜನರ ಸುರಕ್ಷಿತ ಸ್ಥಳಾಂತರ
ಪ್ರವಾಹದ ತೀವ್ರತೆ ಹೆಚ್ಚುತ್ತಿದ್ದಂತೆ ಎನ್ಡಿಆರ್ಎಫ್ (NDRF), ವಿವಿಎಂಸಿ (VVMC) ಹಾಗೂ ಸ್ಥಳೀಯ ರಕ್ಷಣಾ ಪಡೆಗಳು ಜಂಟಿಯಾಗಿ ತುರ್ತು ಕಾರ್ಯಾಚರಣೆಗೆ ಇಳಿದಿವೆ. ತಗ್ಗು ಪ್ರದೇಶದಲ್ಲಿ ಸಿಲುಕಿಕೊಂಡಿದ್ದ 218 ಕುಟುಂಬಗಳ ಸುಮಾರು 891 ಜನರನ್ನು ಸುರಕ್ಷಿತ ತಾಣಗಳಿಗೆ ಯಶಸ್ವಿಯಾಗಿ ರಕ್ಷಿಸಿ ಸ್ಥಳಾಂತರಿಸಲಾಗಿದೆ.
ಮುಂದುವರಿದ ಆತಂಕ, ವ್ಯಕ್ತಿಯ ಶವ ಪತ್ತೆ
ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನೂರಾರು ಸಾರ್ವಜನಿಕರು ಆಸರೆಯಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದು, ಸ್ಥಳೀಯ ಆಡಳಿತವು ಪರಿಹಾರ ಕಾರ್ಯಗಳನ್ನು ಸಮರೋಪಾದಿಯಲ್ಲಿ ನಡೆಸುತ್ತಿದೆ. ಈ ನಡುವೆ ತೆರೆದ ನಾಲೆಯೊಂದರಲ್ಲಿ ಗುರುತು ಸಿಗದ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ಜನರಲ್ಲಿ ಆತಂಕ ಹೆಚ್ಚಿಸಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



