ಹೊಸದಿಗಂತ ಡಿಜಿಟಲ್ ಡೆಸ್ಕ್:
ಧರ್ಮಶಾಲಾದಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಮಹತ್ವದ ಪಂದ್ಯಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ದೊಡ್ಡ ಹಿನ್ನಡೆ ಎದುರಾಗಿದೆ. ತಂಡದ ನಾಯಕ ರಜತ್ ಪಾಟಿದಾರ್ ತಲೆಗೆ ಪೆಟ್ಟು ಬಿದ್ದ ಕಾರಣ ಪಂದ್ಯದಿಂದ ಹೊರಗುಳಿದಿದ್ದು, ಅವರ ಅನುಪಸ್ಥಿತಿಯಲ್ಲಿ ವಿಕೆಟ್ ಕೀಪರ್ ಜಿತೇಶ್ ಶರ್ಮಾ ನಾಯಕತ್ವ ವಹಿಸಿಕೊಂಡಿದ್ದಾರೆ.
ಹೆಲ್ಮೆಟ್ಗೆ ಬಡಿದ ಚೆಂಡು
ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಹಿಂದಿನ ಪಂದ್ಯದಲ್ಲಿ ಕಾರ್ತಿಕ್ ತ್ಯಾಗಿ ಎಸೆದ ಚೆಂಡು ಪಾಟಿದಾರ್ ಹೆಲ್ಮೆಟ್ಗೆ ಬಡಿದಿತ್ತು. ಬಳಿಕ ಅವರಿಗೆ ತಲೆ ಭಾಗದಲ್ಲಿ ತೀವ್ರ ನೋವು ಕಾಣಿಸಿಕೊಂಡ ಹಿನ್ನೆಲೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿತ್ತು. ಇದರ ಪರಿಣಾಮವಾಗಿ ಅವರು ಧರ್ಮಶಾಲಾಕ್ಕೆ ಪ್ರಯಾಣಿಸಿಲ್ಲ. ತಂಡದ ಅಭ್ಯಾಸ ಅವಧಿಯಲ್ಲೂ ಅವರು ಕಾಣಿಸಿಕೊಂಡಿರಲಿಲ್ಲ.
ಇದನ್ನೂ ಓದಿ:
ಐಸಿಸಿ ನಿಯಮ
ಐಸಿಸಿ ನಿಯಮಗಳ ಪ್ರಕಾರ ತಲೆಗೆ ಪೆಟ್ಟು ಬಿದ್ದ ಆಟಗಾರ ಕನಿಷ್ಠ ಏಳು ದಿನ ವಿಶ್ರಾಂತಿ ಪಡೆಯಬೇಕು. ಇದೇ ಕಾರಣದಿಂದ ಪಾಟಿದಾರ್ ಈ ಪಂದ್ಯದಲ್ಲಿ ಆಡುತ್ತಿಲ್ಲ ಎಂದು ತಿಳಿದುಬಂದಿದೆ. ಟಾಸ್ ವೇಳೆ ಮಾತನಾಡಿದ ಜಿತೇಶ್ ಶರ್ಮಾ, “ರಜತ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಅವರು ಬೇಗ ಗುಣಮುಖರಾಗಿ ಮುಂದಿನ ಪಂದ್ಯಕ್ಕೆ ಮರಳಲಿ ಎಂದು ನಾವು ನಿರೀಕ್ಷಿಸುತ್ತಿದ್ದೇವೆ” ಎಂದರು.
ಈ ಪಂದ್ಯದಲ್ಲಿ ಪಾಟಿದಾರ್ ಮತ್ತು ಜಾಕೋಬ್ ಡಫಿ ಬದಲಿಗೆ ಸುಯಶ್ ಶರ್ಮಾ ಹಾಗೂ ರೊಮಾರಿಯೊ ಶೆಫರ್ಡ್ ಅವಕಾಶ ಪಡೆದಿದ್ದಾರೆ.



