ಹೊಸದಿಗಂತ ವರದಿ ಹುಬ್ಬಳ್ಳಿ:
ಜನ ಸ್ಪಂದನ ಅಂದರೆ ಜನರ ಸಂಕಷ್ಟಕ್ಕೆ ಸ್ಪಂದಿಸುವುದು. ರಾಜ್ಯದಲ್ಲಿ ಮಳೆ ಹಾಗೂ ಪ್ರವಾಹದಿಂದ ಜನರು ಸಮಸ್ಯೆ ಎದುರಿಸುತ್ತಿದ್ದರೆ, ಬಿಜೆಪಿಯವರು ಲಂಚದ ಹಣದಲ್ಲಿ ಮಜಾ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.
ನಗರದಲ್ಲಿ ಶನಿವಾರ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ೭ ಲಕ್ಷ ಹೇಕ್ಟರ್ ಬೆಳೆ ಹಾನಿಯಾಗಿದೆ. ಅವರಿಗೆ ಇಲ್ಲಿವರೆಗೂ ಒಂದು ರೂಪಾಯಿ ಪರಿಹಾರ ನೀಡಿಲ್ಲ. ಜನ ಸ್ಪಂದನ ಹೆಸರಲ್ಲಿ ಡ್ಯಾನ್ಸ್ ಮಾಡುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ಹರಿಹಾದರು.
ಯಾವ ಉಸ್ತುವಾರಿ ಸಚಿವರು ಕ್ಷೇತ್ರಕ್ಕೆ ಹೋಗುತ್ತಿಲ್ಲ. ಜನಸಾಮಾನ್ಯರ ಸಮಸ್ಯೆ ಬಗ್ಗೆ ಇವರಿಗೆ ಸ್ವಲ್ಪವಾದರೂ ಕಾಳಜೀ ಇದೇಯಾ ಎಂದು ಪ್ರಶ್ನಿಸಿದ ಅವರು, ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದರು.
ದಾವಣಗೇರಿಯಲ್ಲಿ ನಡೆದ ನನ್ನ ಜನ್ಮೋತ್ಸವದ ಪ್ರತ್ಯುತ್ತರವಾಗಿ ಜನ ಸ್ಪಂದನ ಮಾಡುತ್ತಿದ್ದಾರೆ. ಆ ಸಂದರ್ಭದಲ್ಲಿ ಜನ ಸ್ವಯಂಪ್ರೇರಿತರಾಗಿ ಆಗಮಿಸಿದ್ದರು. ಆದರೆ ಇಲ್ಲಿ ಭ್ರಷ್ಟಾಚಾರದ ಹಣದಲ್ಲಿ ಸಮಾರಂಭ ಮಾಡುತ್ತಿದ್ದಾರೆ ಆಕ್ರೋಶ ವ್ಯಕ್ತಪಡಿಸಿದರು.
ನಿಧನರಾದ ಸಚಿವ ಉಮೇಶ ಕತ್ತಿ ಉತ್ತರ ಕರ್ನಾಟಕದ ಪ್ರಭಾವಿ ರಾಜಕಾರಣಿ ಹಾಗೂ ಬಿಜೆಪಿ ಹಿರಿಯ ಮುತ್ಸದ್ಧಿಯಾಗಿದ್ದರು. ಅವರ ಬಗ್ಗೆ ಒಂದು ಕಡೆ ಶೋಕಚಾರಣೆ ಅನ್ನುತ್ತಾರೆ. ಇನ್ನೊಂದು ಕಡೆ ಡ್ಯಾನ್ಸ್ ಮಾಡುತ್ತಾರೆ ಎಂದು ಹರಿಹಾಯ್ದರು.