ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹನೀಯರ ತ್ಯಾಗ ಬಲಿದಾನದ ಫಲವಾಗಿ ನಾವು ಇಂದು ಸ್ವಾತಂತ್ರ್ಯದ ಫಲವನ್ನು ಅನುಭವಿಸುತ್ತಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಸ್ವಾತಂತ್ರ್ಯದ ಕೂಗು ದೆಹಲಿಯ ಕೆಂಪು ಕೋಟೆಯಿಂದ ಪ್ರತಿಧ್ವನಿಸುತ್ತಿದೆ. ಸಿಖ್ ಗುರುಗಳ ಆದರ್ಶಗಳನ್ನು ಭಾರತ ಇಂದಿಗೂ ಅನುಸರಿಸುತ್ತಿದೆ ಎಂಬ ಮಾತನ್ನು ಹೇಳಿದರು.
ಗುರುವಾರ ರಾತ್ರಿ ಸಿಖ್ ಗುರು ತೇಜ್ ಬಹದ್ದೂರ್ ಅವರ 400 ನೇ ಜನ್ಮದಿನದ ಸಂದರ್ಭದಲ್ಲಿ, ಪ್ರಧಾನಿ ಮೋದಿ ಅವರು ಕೆಂಪು ಕೋಟೆಯಿಂದ ದೇಶವನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ವಿಶೇಷ ಅಂಚೆ ಚೀಟಿ ಮತ್ತು ಸ್ಮರಣಾರ್ಥ ನಾಣ್ಯವನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಿದರು. ಸೂರ್ಯಾಸ್ತದ ನಂತರ ಕೆಂಪುಕೋಟೆಯಲ್ಲಿ ನಿಂತು ಭಾಷಣ ಮಾಡಿದ ಮೊದಲ ಪ್ರಧಾನಿ ಮೋದಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕೆಂಪು ಕೋಟೆಗೆ ಸಮೀಪದಲ್ಲಿರುವ ಗುರುದ್ವಾರ ಸಿಸ್ ಗಂಜ್ ಸಾಹಿಬ್ ಗುರು ತೇಜ್ ಬಹದ್ದೂರ್ ಅವರ ತ್ಯಾಗದ ಸಂಕೇತವಾಗಿದೆ ಎಂದು ಮೋದಿ ಬಣ್ಣಿಸಿದರು. ಗುರುಗಳು ಸಾಮಾಜಿಕ ಜವಾಬ್ದಾರಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ತಮ್ಮ ಶಕ್ತಿಯನ್ನು ಸೇವಾ ಮಾಧ್ಯಮವನ್ನಾಗಿ ಪರಿವರ್ತಿಸಿ, ಸಂಕಷ್ಟಗಳು ಎದುರಾದಾಗಲೆಲ್ಲಾ ದೇಶವನ್ನು ದೊಡ್ಡ ಶಕ್ತಿಯತ್ತ ಕೊಂಡೊಯ್ದಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.
Prime Minister Narendra Modi attends the 400th Parkash Purab celebrations of Sri Guru Teg Bahadur at Red Fort, Delhi pic.twitter.com/3pGZpLAWZK
— ANI (@ANI) April 21, 2022
ಕೆಂಪು ಕೋಟೆಯಲ್ಲಿ ಸುಮಾರು 400 ಕಲಾವಿದರಿಂದ ‘ಶಬ್ಧ ಕೀರ್ತನೆ’ ನಡೆಯಿತು. ಈ ಕಾರ್ಯಕ್ರಮವನ್ನು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವಾಲಯವು ದೆಹಲಿಯ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿಯ ಸಮನ್ವಯದಲ್ಲಿ ಆಯೋಜಿಸಲಾಗಿತ್ತು. ಈ ಸಮಾರಂಭದಲ್ಲಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ದೇಶ ವಿದೇಶಗಳ ಅನೇಕ ಗಣ್ಯರು ಭಾಗವಹಿಸಿದ್ದರು. ದೆಹಲಿ ಪೊಲೀಸರು ಸೇರಿದಂತೆ ಕೇಂದ್ರ ಸರ್ಕಾರಿ ಸಂಸ್ಥೆಗಳ ಹತ್ತು ಸಾವಿರ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಅಲ್ಲದೆ, ಕೆಂಪುಕೋಟೆಯ ಸಂಕೀರ್ಣದಲ್ಲಿ ಸುಮಾರು 100 ಸಿಸಿಟಿವಿ ಕ್ಯಾಮೆರಾಗಳನ್ನು ಹಾಕಲಾಗಿತ್ತು.