ಹೊಸದಿಗಂತ ಡಿಜಿಟಲ್ ಡೆಸ್ಕ್:
ಗ್ರೇಟರ್ ನೋಯ್ಡಾದ ಇಂಡಿಯಾ ಎಕ್ಸ್ಪೋ ಸೆಂಟರ್ ಮತ್ತು ಮಾರ್ಟ್ನಲ್ಲಿ ಆಯೋಜಿಸಲಾಗಿರುವ ಇಂಟರ್ನ್ಯಾಷನಲ್ ಡೈರಿ ಫೆಡರೇಶನ್ ವರ್ಲ್ಡ್ ಡೈರಿ ಶೃಂಗಸಭೆ (ಐಡಿಎಫ್ ಡಬ್ಲ್ಯುಡಿಎಸ್) 2022 ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉದ್ಘಾಟಿಸಿದರು. ಈ ಸಮಯದಲ್ಲಿ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಪರಶೋತ್ತಮ್ ರೂಪಾಲಾ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇತರರು ಉಪಸ್ಥಿತರಿದ್ದರು.
ವಿಶ್ವ ಡೈರಿ ಶೃಂಗಸಭೆ 2022 ಅನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಪುರಷೋತ್ತಮ್ ರೂಪಲಾ, “ಭಾರತದಲ್ಲಿ 48 ವರ್ಷಗಳ ನಂತರ ವಿಶ್ವ ಡೈರಿ ಶೃಂಗಸಭೆ 2022 ಅನ್ನು ಆಯೋಜಿಸಲಾಗಿದೆ. ನಮ್ಮ ಹಾಲಿನ ಉತ್ಪಾದನೆಯು ಇಂದು 220 ಮಿಲಿಯನ್ ಟನ್ಗಳಾಗಿದ್ದು, ‘ಆತ್ಮ ನಿರ್ಭರ ಭಾರತ್’ಗೆ ಅನುಗುಣವಾಗಿ ಹೆಚ್ಚುವರಿ ಹಾಲನ್ನು ರಫ್ತು ಮಾಡುವ ಸ್ಥಾನದಲ್ಲಿದ್ದೇವೆ ಎಂದರು.
ಪ್ರಧಾನ ಮಂತ್ರಿ ಕಾರ್ಯಾಲಯದ ಪ್ರಕಾರ, ಸೆಪ್ಟೆಂಬರ್ 12ರಿಂದ 15ರವರೆಗೆ ನಾಲ್ಕು ದಿನಗಳ ಕಾಲ ನಡೆಯಲಿರುವ ಈ ಶೃಂಗಸಭೆಯು ‘ಪೌಷ್ಟಿಕಾಂಶ ಮತ್ತು ಜೀವನೋಪಾಯಕ್ಕಾಗಿ ಹೈನುಗಾರಿಕೆ’ ಎಂಬ ವಿಷಯಾಧಾರಿತವಾಗಿದ್ದು, ಕೈಗಾರಿಕೋದ್ಯಮಿಗಳು, ತಜ್ಞರು, ರೈತರು ಮತ್ತು ನೀತಿ ನಿರೂಪಕರು ಸೇರಿದಂತೆ ಜಾಗತಿಕ ಮತ್ತು ಭಾರತೀಯ ಡೈರಿ ವಲಯದವರು ಪಾಲ್ಗೊಳ್ಳಲಿದ್ದಾರೆ. ʻಐಡಿಎಫ್ ಡಬ್ಲ್ಯೂಡಿಎಸ್-2022ʼದಲ್ಲಿ 50 ದೇಶಗಳಿಂದ ಸುಮಾರು 1500 ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಇಂತಹ ಕೊನೆಯ ಶೃಂಗಸಭೆಯು ಸುಮಾರು ಅರ್ಧ ಶತಮಾನದ ಹಿಂದೆ 1974ರಲ್ಲಿ ಭಾರತದಲ್ಲಿ ನಡೆದಿತ್ತು.
ಭಾರತೀಯ ಡೈರಿ ಉದ್ಯಮವು ಒಂದು ಸಹಕಾರಿ ಮಾದರಿಯನ್ನು ಆಧರಿಸಿದೆ. ಇದು ಸಣ್ಣ ಮತ್ತು ಅತಿ ಸಣ್ಣ ಡೈರಿ ರೈತರು ಸೇರಿದಂತೆ ವಿಶೇಷವಾಗಿ ಮಹಿಳೆಯರನ್ನು ಸಬಲೀಕರಣಗೊಳಿಸುತ್ತದೆ. ಪ್ರಧಾನ ಮಂತ್ರಿಯವರ ದೂರದೃಷ್ಟಿಯಿಂದ ಪ್ರೇರೇಪಿಸಲ್ಪಟ್ಟ ಸರ್ಕಾರವು ಹೈನುಗಾರಿಕೆಯ ಸುಧಾರಣೆಗಾಗಿ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ. ಕಳೆದ ಎಂಟು ವರ್ಷಗಳಲ್ಲಿ ಹಾಲಿನ ಉತ್ಪಾದನೆಯು ಶೇಕಡಾ 44 ಕ್ಕಿಂತ ಹೆಚ್ಚು ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಪಿಎಂಒ ತಿಳಿಸಿದೆ.