ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಬಲ್ ಇಂಜಿನ್ ಸರ್ಕಾರದಿಂದಾಗಿ ಈಶಾನ್ಯ ಪ್ರದೇಶದ ಅಭಿವೃದ್ಧಿ ಸಾಧ್ಯವಾಗಿದೆ ಎಂದು ಅಸ್ಸಾಂನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ. “ಇಂದು, ಡಬಲ್ ಇಂಜಿನ್ ಸರ್ಕಾರವು ‘ಸಬ್-ಕಾ ಸಾಥ್ ಸಬ್-ಕಾ ವಿಕಾಸ್’ ಎಂಬ ಮಂತ್ರದೊಂದಿಗೆ ರಾಷ್ಟ್ರವನ್ನು ಅಭಿವೃದ್ಧಿಪಡಿಸುತ್ತಿದೆ” ಎಂದು ಅಸ್ಸಾಂನ ದಿಫುನಲ್ಲಿ ‘ಶಾಂತಿ, ಏಕತೆ ಮತ್ತು ಅಭಿವೃದ್ಧಿ ರ್ಯಾಲಿಯನ್ನುದ್ದೇಶಿಸಿ ಪ್ರಧಾನಿ ಮೋದಿ ಹೇಳಿದರು.
ಈಶಾನ್ಯ ಪ್ರದೇಶಗಳ ಅಭಿವೃದ್ಧಿಯ ಬಗ್ಗೆ ಸಂತಸ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ʻಇಂದು ಯಾರಾದರೂ ಈಶಾನ್ಯಕ್ಕೆ ಭೇಟಿ ನೀಡಿ ಮತ್ತು ಈ ಪ್ರದೇಶದಲ್ಲಿ ನಡೆಯುತ್ತಿರುವ ಕ್ಷಿಪ್ರ ಅಭಿವೃದ್ಧಿಯನ್ನು ಕಂಡು ಹೆಮ್ಮೆಪಡುತ್ತಾರೆ. ನಾವು ಈ ಪ್ರದೇಶದ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಅಭಿವೃದ್ದಿ ಎಂಬ ಮೂಲ ಮಂತ್ರವನ್ನು ಜಪಿಸಿದ್ದೇವೆ ಎಂದರು.
‘ಆಜಾದಿ ಕಾ ಅಮೃತ್ ಮಹೋತ್ಸವ’ದ ಆಚರಣೆಯ ಜತೆಗೆ ದೇಶದ ಪ್ರತಿ ಜಿಲ್ಲೆಯಲ್ಲಿ ‘ಅಮೃತ ಸರೋವರ’ ನಿರ್ಮಿಸುವ ಯೋಜನೆಯನ್ನು ಭಾರತ ಸರ್ಕಾರ ಆರಂಭಿಸುತ್ತಿದೆ ಎಂದರು. 2,600 ಕ್ಕೂ ಹೆಚ್ಚು ‘ಅಮೃತ ಸರೋವರ’ ನಿರ್ಮಿಸುವ ಕೆಲಸ ಪ್ರಾರಂಭವಾಗಿದೆ. ಬುಡಕಟ್ಟು ಸಮಾಜದಲ್ಲಿ ಇಂತಹ ಜಲಮೂಲಗಳು ಶ್ರೀಮಂತ ಸಂಪ್ರದಾಯವನ್ನು ಹೊಂದಿವೆ, ಇದರೊಂದಿಗೆ ಪ್ರತಿ ಹಳ್ಳಿಯಲ್ಲಿ ಜಲ ಸಂಗ್ರಹಾಗಾರಗಳನ್ನು ರಚಿಸಲಾಗುವುದು ಮತ್ತು ಅವುಗಳು ಜನರ ಆದಾಯದ ಮೂಲವಾಗುತ್ತವೆʼ ಎಂದರು.
ದಿಫು ಪಟ್ಟಣದಲ್ಲಿ ‘ಶಾಂತಿ, ಏಕತೆ ಮತ್ತು ಅಭಿವೃದ್ಧಿ ರ್ಯಾಲಿ’ಯಲ್ಲಿ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಪ್ರಧಾನಿ ಮೋದಿಯವರಿಗೆ ಸಾಥ್ ನೀಡಿದರು.