ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ವಿಧಾನಸಭೆ ಚುನಾವಣೆಗೆ ಮತದಾನಕ್ಕೆ ಇನ್ನು 5 ದಿನಗಳ ಮಾತ್ರ ಬಾಕಿ ಇದೆ. ಹೀಗಾಗಿ ಚುನಾವಣಾ ಪ್ರಚಾರದ ಕಾವು ಮತ್ತಷ್ಟು ಬಿರುಸುಗೊಂಡಿದೆ. ಒಂದೆಡೆ ಕಾಂಗ್ರೆಸ್ ಪಕ್ಷವನ್ನು ಈ ಬಾರಿ ಶತಾಯಗತಾಯ ಅಧಿಕಾರದ ಗದ್ದುಗೆಗೇರಿಸಲೇ ಬೇಕು ಎಂದು ಅಭ್ಯರ್ಥಿಗಳ ಪರ ಗಾಂಧಿ ಪರಿವಾರವೇ ಅಖಾಡಕ್ಕೆ ಧುಮುಕಿ ಪ್ರಚಾರ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಬಿಜೆಪಿ ಈ ಬಾರಿ ಬಹುಮತದೊಂದಿಗೆ ಸರ್ಕಾರ ರಚಿಸಲು ಸಾಕಷ್ಟು ಕಸರತ್ತು ನಡೆಸುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ, ಕೇಂದ್ರ ನಾಯಕರ ದಂಡೇ ಕರ್ನಾಟಕ ಚುನಾವಣೆಗಾಗಿ ಮತಬೇಟೆ ನಡೆಸುತ್ತಿದ್ದಾರೆ. ಇಂದಿನಿಂದ 3 ದಿನಗಳ ಕಾಲ ಪ್ರಧಾನಿ ಮೋದಿ ರಾಜ್ಯದಲ್ಲಿಯೇ ವಾಸ್ತವ್ಯ ಹೂಡಲಿದ್ದು ಹಲವು ಜಿಲ್ಲೆಗಳಲ್ಲಿ ರೋಡ್ ಶೋ, ಸಮಾವೇಶದ ಮೂಲಕ ಮತ ಯಾಚನೆ ನಡೆಸಲಿದ್ದಾರೆ.
ಇಂದು (ಶುಕ್ರವಾರ) ದೆಹಲಿಯಿಂದ ರಾಜ್ಯಕ್ಕೆ ಆಗಮಿಸಲಿರುವ ಪ್ರಧಾನಿ, ಮಧ್ಯಾಹ್ನ 2 ಗಂಟೆಗೆ ಬಳ್ಳಾರಿ ಹಾಗೂ 4:30ಕ್ಕೆ ತುಮಕೂರು ಗ್ರಾಮಾಂತರದಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.