ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ‘ಪಿಎಂ ಶ್ರೀ ಶಾಲೆ’ ಗಳ ಸ್ಥಾಪನೆಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದ್ದು, ಇದು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಯೋಗಾಲಯವಾಗಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಗುರುವಾರ ಹೇಳಿದ್ದಾರೆ.
ಗುಜರಾತಿನಲ್ಲಿ ಎರಡು ದಿನಗಳ ರಾಷ್ಟ್ರದ ಶಿಕ್ಷಣ ಸಚಿವರ ಸಮ್ಮೇಳನದಲ್ಲಿ ಮಾತನಾಡಿದ ಅವರು, ಜ್ಞಾನಧಾರಿತ ಆರ್ಥಿಕತೆಯ ರಾಷ್ಟ್ರವಾಗಿ ದೇಶ ಹೊರಹೊಮ್ಮುವಲ್ಲಿ ಶಾಲಾ ಶಿಕ್ಷಣ ಅಡಿಪಾಯವಾಗಿದೆ ಎಂದರು.
ಭವಿಷ್ಯಕ್ಕಾಗಿ ವಿದ್ಯಾರ್ಥಿಗಳನ್ನು ತಯಾರು ಮಾಡಲು ‘ಪಿಎಂ ಶ್ರೀ ಶಾಲೆ’ಗಳ ಸ್ಥಾಪನೆ ಬಗ್ಗೆ ಪ್ರಕ್ರಿಯೆಗಳು ನಡೆಯುತ್ತಿವೆ.
ಈ ಸಮ್ಮೇಳನದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಟಾನವನ್ನು ವಿರೋಧಿಸಿ ತಮಿಳುನಾಡು ಭಾಗವಹಿಸದೆ ಬಹಿಷ್ಕರಿಸಿದೆ. ಉಳಿದ ರಾಜ್ಯಗಳ ಶಿಕ್ಷಣ ಸಚಿವರು ಹಾಜರಾಗಿದ್ದರು.
21ನೇ ಶತಮಾನದ ಜ್ಞಾನ ಮತ್ತು ಕೌಶಲ್ಯದಿಂದ ಹೊಸ ಪೀಳಿಗೆ ವಂಚಿತವಾಗಬಾರದು. ಪಿಎಂ ಶ್ರೀ ಶಾಲೆಗಳ ಮಾದರಿಗಾಗಿ ನೀತಿ ರೂಪಿಸಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಪ್ರೋತ್ಸಾಹ ಮತ್ತು ಸಲಹೆಗಳನ್ನು ಪಡೆಯಲು ಇಚ್ಚಿಸುವುದಾಗಿ ತಿಳಿಸಿದರು.
ಕರ್ನಾಟಕ, ಒಡಿಶಾ, ದೆಹಲಿ, ಮೇಘಾಲಯ, ಬಿಹಾರ್, ಉತ್ತರ ಪ್ರದೇಶ, ಗುಜರಾತ್ ಮತ್ತು ಹರಿಯಾಣದ ಶಿಕ್ಷಣ ಮಾದರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.