ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಕೆದಾಟು ಜಲಾಶಯ ಯೋಜನೆ ವಿಚಾರ ಮತ್ತೆ ಕರ್ನಾಟಕ ಮತ್ತು ತಮಿಳುನಾಡು ನಡುವೆ ರಾಜಕೀಯ ಹಾಗೂ ಜಲ ವಿವಾದದ ಕಿಚ್ಚು ಹೊತ್ತಿಸಿದೆ. ಕರ್ನಾಟಕದ ಯೋಜನೆ ಪ್ರಸ್ತಾವನೆಗೆ ಕೇಂದ್ರ ಜಲಶಕ್ತಿ ಸಚಿವಾಲಯ ಮತ್ತು ಸಿಡಬ್ಲ್ಯುಸಿ ಸ್ಪಂದಿಸಿರುವುದಕ್ಕೆ ತಮಿಳುನಾಡು ಮುಖ್ಯಮಂತ್ರಿ ವಿಜಯ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಧಾನಿಗೆ ತಮಿಳುನಾಡು ಸಿಎಂ ಪತ್ರ
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ವಿಜಯ್, ಕರ್ನಾಟಕ ಸಲ್ಲಿಸಿರುವ ಡಿಪಿಆರ್ ಅನ್ನು ತಿರಸ್ಕರಿಸುವಂತೆ ಮನವಿ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ಹಾಗೂ ಕಾವೇರಿ ನ್ಯಾಯಮಂಡಳಿಯ ಆದೇಶಗಳಿಗೆ ವಿರುದ್ಧವಾಗಿ ಯೋಜನೆ ಮುಂದುವರಿಯುತ್ತಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ:
‘ರೈತರಲ್ಲಿ ಆತಂಕ ಹೆಚ್ಚಾಗಿದೆ’
ಕರ್ನಾಟಕ ಸರ್ಕಾರದ ಭೂಮಿ ಪೂಜೆ ಘೋಷಣೆ ಮತ್ತು ಉಪಮುಖ್ಯಮಂತ್ರಿ ಅವರ ಹೇಳಿಕೆಗಳು ಕಾವೇರಿ ನೀರಿನ ಮೇಲೆ ಅವಲಂಬಿತ ತಮಿಳುನಾಡಿನ ರೈತರಲ್ಲಿ ಆತಂಕ ಸೃಷ್ಟಿಸಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಕಾವೇರಿ ನದಿಗೆ ಸಂಬಂಧಿಸಿದ ಯಾವುದೇ ಹೊಸ ಯೋಜನೆ ಕೈಗೆತ್ತಿಕೊಳ್ಳುವ ಮುನ್ನ ಸಹ-ಜಲಾನಯನ ರಾಜ್ಯಗಳ ಅನುಮತಿ ಕಡ್ಡಾಯ ಎಂದು ತಮಿಳುನಾಡು ಸರ್ಕಾರ ಒತ್ತಾಯಿಸಿದೆ.
ಮತ್ತೆ ರಾಜಕೀಯ ತಿರುವು ಪಡೆದ ಕಾವೇರಿ ವಿವಾದ
2018ರ ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಶಾಂತವಾಗಿದ್ದ ಕಾವೇರಿ ವಿವಾದ ಇದೀಗ ಮೇಕೆದಾಟು ಯೋಜನೆಯ ಮೂಲಕ ಮತ್ತೆ ರಾಜಕೀಯ ಹಾಗೂ ಕಾನೂನು ಚರ್ಚೆಗೆ ಕಾರಣವಾಗಿದೆ.



