ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರೋವರ ಕ್ಷೇತ್ರ ಕಾಸರಗೋಡು ಜಿಲ್ಲೆ ಕುಂಬಳೆಯ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮೀ ದೇವಸ್ಥಾನದ ಬಬಿಯಗೆ ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾಡುವ ಮೂಲಕ ಅಂಚೆ ಇಲಾಖೆ ವಿಶೇಷ ಗೌರವ ನೀಡಿದೆ.
ದೇವರ ಮೊಸಳೆ ಎಂದೇ ಖ್ಯಾತಿ ಪಡೆದು ಹಲವು ವಿಶೇಷತೆಗಳೊಂದಿಗೆ ಕ್ಷೇತ್ರದ ಸರೋವರದಲ್ಲಿ ವಾಸವಿದ್ದ ‘ಬಬಿಯ’ ಇತ್ತೀಚೆಗಷ್ಟೇ ಇಹಲೋಕ ತ್ಯಜಿಸಿತ್ತು. ಇದೀಗ ಈ ಮೊಸಳೆಯ ಸ್ಮರಣಾರ್ಥ ಅಂಚೆ ಇಲಾಖೆಯ ನೇತೃತ್ವದಲ್ಲಿ ವಿಶೇಷ ಅಂಚೆ ಲಕೋಟೆ ಬಿಡುಗಡೆಯಾಗಿದೆ.
ದೇವಸ್ವಂ ಬೋರ್ಡ್ನ ಕಾಸರಗೋಡು ವಿಭಾಗದ ಅಧ್ಯಕ್ಷ ಕೊಟ್ಟಾರ ವಾಸುದೇವನ್ ಅವರ ಉಪಸ್ಥಿತಿಯಲ್ಲಿ ಕಾಸರಗೋಡು ಜಿಲ್ಲಾ ಅಂಚೆ ಅಧೀಕ್ಷಕಿ ವಿ. ಶಾರದಾ ಅವರು ಕುಂಬಳೆ ಅಂಚೆ ಕಚೇರಿಯಲ್ಲಿ ಅಂಚೆ ಲಕೋಟೆ ಬಿಡುಗಡೆಗೊಳಿಸಿದರು. ಶ್ರೀ ಕ್ಷೇತ್ರದ ಟ್ರಸ್ಟ್ ಅಧ್ಯಕ್ಷ ಅಧ್ಯಕ್ಷ, ವಕೀಲ ಉದಯಕುಮಾರ್ ಅವರು ಮೊದಲ ಸ್ಟಾಂಪ್ ಕವರ್ ಸ್ವೀಕರಿಸಿದರು. ಈ ಸಂದರ್ಭ ದೇವಸ್ಥಾನದ ವ್ಯವಸ್ಥಾಪಕ ಲಕ್ಷ್ಮಣ ಹೆಬ್ಬಾರ್, ಗಣೇಶ್ ವಿ., ಡಾ. ಸೋಮೇಶ್ವರ ಗಟ್ಟಿ ಬಳ್ಳಾರಿ, ಪ್ರಿಯಾ, ಅಂಚೆ ಇಲಾಖೆಯ ಸಹಾಯಕ ಅಧೀಕ್ಷಕಿ ಪಿ.ಆರ್.ಶೀಲಾ, ಕುಂಬಳೆ ಪೋಸ್ಟ್ ಮಾಸ್ಟರ್ ಪಿ. ಶಾಂತಕುಮಾರಿ ಉಪಸ್ಥಿತರಿದ್ದರು.
ಈ ವಿಶೇಷ ಅಂಚೆ ಲಕೋಟೆ ದೇಶದ ವಿವಿಧ ಅಂಚೆ ಚೀಟಿಗಳ ಸಂಗ್ರಹಾಲಯಗಳಲ್ಲಿ 10 ರೂ. ದರದಲ್ಲಿ ಲಭ್ಯವಿದೆ ಎಂದು ಇಲಾಖೆ ಹೇಳಿದೆ.