ಹೊಸದಿಗಂತ ಡಿಜಿಟಲ್ ಡೆಸ್ಕ್ :
ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಭದಿಸಿದಂತೆ ತನಿಖೆಯ ಭಾಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿರುವ ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಕಚೇರಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಸೋಮವಾರ ವಶಪಡಿಸಿಕೊಂಡಿದೆ.
ಈ ಪ್ರಕರಣ ಸಂಬಂಧ ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಲಾಗುತ್ತಿದ್ದ ಸುಳ್ಯದ ಪಿಎಫ್ಐ ಕಚೇರಿಯನ್ನು ಎನ್ಐಎ ಸಂಪೂರ್ಣವಾಗಿ ವಶಕ್ಕೆ ಪಡೆದುಕೊಂಡಿದೆ.
ಸುಳ್ಯದಲ್ಲಿರುವ ಗಾಂಧಿನಗರದ ಆಲೆಟ್ಟಿ ರಸ್ತೆಯಲ್ಲಿರುವ ತಾಹಿರಾ ಕಾಂಪ್ಲೆಕ್ಸ್ನ ಮೊದಲ ಮಹಡಿಯಲ್ಲಿ ಈ ಕಚೇರಿ ಇತ್ತು. ಕಟ್ಟಡದ ಮಾಲೀಕರಿಗೆ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗೆ ಜಪ್ತಿ ಮಾಡಿಕೊಳ್ಳಲಾದ ಆದೇಶ ಪ್ರತಿಯನ್ನು ಕಳುಹಿಸಲಾಗಿದೆ.
ಎನ್ಐಎ ವಶದಲ್ಲಿರುವ ಈ ಜಾಗವನ್ನು ಗುತ್ತಿಗೆ ಅಥವಾ ಬಾಡಿಗೆಗೆ ನೀಡಬಾರದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಯಾವುದೇ ವಸ್ತುವನ್ನು ಕಚೇರಿಯಿಂದ ಸ್ಥಳಾಂತರಿಸುವುದು ಅಥವಾ ನವೀಕರಣ ಕಾರ್ಯವನ್ನು ಕೈಗೊಳ್ಳದಂತೆ ನಿರ್ದೇಶನಗಳನ್ನು ನೀಡಲಾಗಿದೆ.
ಪ್ರವೀನ್ ನೆಟ್ಟಾರು ಕೊಲೆ ಸಂಚನ್ನು ಇದೇ ಕಚೇರಿಯಲ್ಲಿ ಮಾಡಲಾಗಿತ್ತು ಎಂದು ಎನ್ಐಎ ತನಿಖೆ ವೇಳೆ ತಿಳಿದು ಬಂದಿತ್ತು.