ಹೊಸದಿಗಂತ ವರದಿ, ತುಮಕೂರು:
ಅಕ್ರಮವಾಗಿ ನಾಡಬಂದೂಕುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ವ್ಯಕ್ತಿ ಹಾಗೂ ಅವುಗಳನ್ನು ಖರೀದಿಸಿದವರು ಒಳಗೊಂಡಂತೆ ಒಂಬತ್ತು ಮಂದಿಯನ್ನು ಕ್ಯಾತ್ಸಂದ್ರ ಪೊಲೀಸರು ಬಂಧಿಸಿದ್ದಾರೆ.
ಊರ್ಡಿಗೆರೆ ಹೋಬಳಿಯ ದುರ್ಗದ ಹಳ್ಳಿಯ ಕೃಷ್ಣಪ್ಪ ಎಂಬ ಕಾರ್ಪೆಂಟರ್ ತನ್ನ ಮನೆಯಲ್ಲಿ ಎಸ್.ಬಿ.ಎಂ.ಎಲ್.ಬಂದೂಕುಗಳನ್ನು ತಯಾರಿಸುತ್ತಿದ್ದು, ಅವುಗಳಿಗೆ ಬೇಕಾದ ನಳಿಗೆಗಳನ್ನು ಮಡಿಪೇಟೆಯಲ್ಲಿ ಗ್ಯಾಸ್ ವೆಲ್ಡಿಂಗ್ ಅಂಗಡಿ ಇಟ್ಟುಕೊಂಡಿದ್ದ ಮೊಹಮದ್ ಅಯಾಜ್ ಅಹಮದ್ ಸಿದ್ದಪಡಿಸಿಕೊಡುತ್ತಿದ್ದ ಎಂಬುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.
ಈ ಇಬ್ಬರ ಜೊತೆಯಲ್ಲಿ ಬಂದೂಕುಗಳನ್ನು ಖರೀದಿಸಿದ್ದ ಚಿಕ್ಕನಾಗಯ್ಯ, ಶಿವರಾಜು, ಡ್ರೈವರ್ ನರಸಿಂಹಮೂರ್ತಿ, ನರಸರಾಜು,
ಸಿದ್ಧಗಂಗಪ್ಪ, ಮಾರುತೇಶ ಟಿ.ವಿ. ಹಾಗೂ ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದರಲ್ಲಿ ಬಂಧಿತನಾಗಿ ಬಿಡುಗಡೆ ಆಗಿದ್ದ ನಾರಾಯಣ ಎಂಬುವವರನ್ನು ಬಂಧಿಸಿದ್ದಾರೆ.
ಕೃಷ್ಣಪ್ಪ ಬಂದೂಕುಗಳನ್ನು ಪ್ರತಿ ಬಂದೂಕಿಗೆ 10 ರಿಂದ 20 ಸಾವಿರರೂಗಳಿಗೆ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ