ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದಿನಿಂದ ಮೂರು ದಿನಗಳ ಕಾಲ ಬಿಹಾರಕ್ಕೆ ಭೇಟಿ ನೀಡಲಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಮುರ್ಮು ಅವರ ಭೇಟಿಯ ವೇಳೆ ನಾಲ್ಕನೇ ಬಿಹಾರ ಕೃಷಿ ಮಾರ್ಗಸೂಚಿ 2023-2028 ಬಿಡುಗಡೆ ಮಾಡಲಿದ್ದು, ಮೂರು ಘಟಿಕೋತ್ಸವಗಳು ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಧಿಕಾರ ವಹಿಸಿಕೊಂಡ ನಂತರ ಬಿಹಾರಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. ಇಂದು ಮಧ್ಯಾಹ್ನ ಪಾಟ್ನಾದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಿಹಾರ ಕೃಷಿ ಮಾರ್ಗಸೂಚಿಯನ್ನು ಅವರು ಬಿಡುಗಡೆ ಮಾಡಲಿದ್ದಾರೆ. ಇದು ಮುಂದಿನ ಐದು ವರ್ಷಗಳ ಕಾಲ ರಾಜ್ಯದಲ್ಲಿ ಕೃಷಿ ಅಭಿವೃದ್ಧಿಗೆ ಮಾರ್ಗಸೂಚಿ ನೀಲನಕ್ಷೆಯಾಗಿದೆ. ಕಾರ್ಯಕ್ರಮದಲ್ಲಿ 1800ಕ್ಕೂ ಹೆಚ್ಚು ರೈತರು ಮತ್ತು 700 ಸ್ವಸಹಾಯ ಗುಂಪಿನವರು ಪಾಲ್ಗೊಳ್ಳಲಿದ್ದಾರೆ. ಅಲ್ಲದೇ ಗುರು ಗೋವಿಂದ್ ಸಿಂಗ್ ಜಿ ಮಹಾರಾಜ್ ಅವರ ಜನ್ಮಸ್ಥಳವಾದ ಪಾಟ್ನಾ ನಗರದ ತಖ್ತ್ ಶ್ರೀ ಹರಿಮಂದಿರ್ ಸಾಹಿಬ್ನಲ್ಲಿ ರಾಷ್ಟ್ರಪತಿಗಳು ಪ್ರಾರ್ಥನೆ ಸಲ್ಲಿಸಲಿದ್ದಾರೆ.
ನಾಳೆ ರಾಷ್ಟ್ರಪತಿಗಳು ಮೋತಿಹಾರಿಯಲ್ಲಿನ ಮಹಾತ್ಮ ಗಾಂಧಿ ಕೇಂದ್ರೀಯ ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಮರುದಿನ ಅವರು ಪಾಟ್ನಾದ AIIMS ವೈದ್ಯಕೀಯ ಸಂಸ್ಥೆಯ ಮೊದಲ ಘಟಿಕೋತ್ಸವ ಸಮಾರಂಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪದವಿ ಮತ್ತು ಪದಕಗಳನ್ನು ಪ್ರದಾನ ಮಾಡುತ್ತಾರೆ.
ಗುರುವಾರ ಸಂಜೆ ರಾಷ್ಟ್ರಪತಿಗಳು ರಾಜಭವನದಲ್ಲಿ ದುರ್ಬಲ ಬುಡಕಟ್ಟು ಗುಂಪುಗಳ (ಪಿವಿಟಿಜಿ) ಸದಸ್ಯರೊಂದಿಗೆ ಸಂವಾದ ನಡೆಸಲಿದ್ದಾರೆ. ಈ ಸದಸ್ಯರು ಬುಡಕಟ್ಟು ವ್ಯವಹಾರಗಳ ಸಚಿವಾಲಯದಿಂದ ಬಿರ್ಹೋರ್, ಪಹಾರಿಯಾ ಮತ್ತು ಅಸುರ್ಸ್ನಂತಹ 75 ಪಟ್ಟಿ ಮಾಡಲಾದ ದುರ್ಬಲ ಬುಡಕಟ್ಟುಗಳ ಭಾಗವಾಗಿದ್ದಾರೆ.
ರಾಷ್ಟ್ರಪತಿಗಳು ಶುಕ್ರವಾರ ದಕ್ಷಿಣ ಬಿಹಾರ ಕೇಂದ್ರೀಯ ವಿಶ್ವವಿದ್ಯಾಲಯದ ಗಯಾದ 3ನೇ ಘಟಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಷ್ಟ್ರಪತಿಗಳ ಭೇಟಿ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.