ಹೊಸದಿಗಂತ ಡಿಜಿಟಲ್ ಡೆಸ್ಕ್:
ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದ (BHU) ಸಹಯೋಗದಲ್ಲಿ ವಿವಿಯ ಆಂಫಿಥಿಯೇಟರ್ ಮೈದಾನದಲ್ಲಿ ಶಿಕ್ಷಣ ಸಚಿವಾಲಯವು ಹಮ್ಮಿಕೊಂಡಿರುವ ಒಂದು ತಿಂಗಳ `ಕಾಶಿ-ತಮಿಳು ಸಂಗಮ’ ಸಾಂಸ್ಕೃತಿಕ ಉತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ.
ಈ ಉತ್ಸವಕ್ಕೆ ಪ್ರಧಾನಿ ಮೋದಿ ಅವರು ಸಾಂಪ್ರದಾಯಿಕ ಉಡುಗೆಯಲ್ಲೇ ಆಗಮಿಸಿ ಕಾರ್ಯಕ್ರಮದ ಕಲೆಯನ್ನು ಮತ್ತಷ್ಟು ಹೆಚ್ಚಿಸಿದರು. ಶ್ವೇತ ವರ್ಣದಲ್ಲಿ ಕಂಗೊಳಿಸುವ ಬಿಳಿಯ ಉಡುಪು ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಎಲ್ಲರ ಗಮನಸೆಳೆಯಿತು.
`ಕಾಶಿ-ತಮಿಳು ಸಂಗಮ’ ಕಾರ್ಯಕ್ರಮವು ತೀರ್ಥಯಾತ್ರಿಕರ ಪುಣ್ಯಸ್ಥಳ ಕಾಶಿ ಹಾಗೂ ತಮಿಳುನಾಡಿನ ಸಂಬಂಧವನ್ನು ಪುನರುಜ್ಜೀವನಗೊಳಿಸುವ ಹಾಗೂ ಕೇಂದ್ರ ಸರ್ಕಾರದ `ಏಕ್ ಭಾರತ್ ಶ್ರೇಷ್ಠ ಭಾರತ್’ ಪರಿಕಲ್ಪನೆಯನ್ನು ಎತ್ತಿಹಿಡಿಯುವ ಗುರಿಯನ್ನೂ ಹೊಂದಿದೆ.
ಪ್ರಧಾನಿ ಮೋದಿ ತಮಿಳುನಾಡಿನ ಮಠ, ದೇವಾಲಯಗಳಿಗೆ ಗೌರವ ಸಲ್ಲಿಸಿ, ಗುರುಗಳಿಂದ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಉತ್ತರಪ್ರದೇಶದ ರಾಜ್ಯಪಾಲ ಆನಂದಿಬೆನ್ ಪಟೇಲ್, ಸಿಎಂ ಯೋಗಿ ಆದಿತ್ಯನಾಥ್ , ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮೊದಲಾದವರು ಉಪಸ್ಥಿತರಿದ್ದರು.
ಈ ಉತ್ಸವದಲ್ಲಿ ಒಟ್ಟು 51 ಸಾಂಸ್ಕೃತಿಕ ಕಾರ್ಯಕ್ರಮಗಳಿರಲಿದ್ದು, ಶಿವ ಪುರಾಣ, ರಾಮಾಯಣ ಮತ್ತು ಮಹಾಭಾರತ ಪೌರಾಣಿಕ, ಐತಿಹಾಸಿಕ ನಾಟಕವನ್ನು ಆಧರಿಸಿದ ಬೊಂಬೆ ಪ್ರದರ್ಶನ ನಡೆಯಲಿದೆ.