ಪರೀಕ್ಷೆ ಕುರಿತು ಪ್ರಧಾನಿ ಮೋದಿಯವರ ಮಾತುಗಳು ಅತ್ಯಂತ ಪ್ರೋತ್ಸಾಹದಾಯಕ: ಸಚಿವ ನಾಗೇಶ್

ಹೊಸದಿಗಂತ ವರದಿ,ತುಮಕೂರು:

ಪರೀಕ್ಷೆ ಭಯ ಹೋಗಲಾಡಿಸುವ ಕುರಿತು ಪ್ರಧಾನಿ ನರೇಂದ್ರ ಮೋದಿಯವರ ಮಾತುಗಳು ಅತ್ಯಂತ ಪ್ರೋತ್ಸಾಹದಾಯಕವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ . ನಾಗೇಶ್ ಹೇಳಿದರು. ತುಮಕೂರಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪರೀಕ್ಷಾಪೇ ಚರ್ಚೆ ಕಾರ್ಯಕ್ರಮ ವೀಕ್ಷಿಸಿದ ನಂತರ ಅವರು ಮಾತನಾಡುತ್ತಿದ್ದರು
ಜೀವನದಲ್ಲಿ ಸಾಧನೆ ಮಾಡಲು ಇರುವ ಹತ್ತಾರು ಅವಕಾಶಗಳು, ಮಾರ್ಗಗಳ ಪೈಕಿ ಶೈಕ್ಷಣಿಕ ಜೀವನದಲ್ಲಿ ಅಂಕ ಗಳಿಕೆ ಅಥವಾ ರ‌್ಯಾಂಕ್ ಸಾಧನೆ ಕೂಡ ಒಂದಾಗಿದೆ. ಆದರೆ, ಅಂಕ ಗಳಿಕೆಯೊಂದೇ ಜೀವನದ ಮಹತ್ಸಾಧನೆಯಲ್ಲ ಎಂದರು
‘ವರ್ಷವಿಡೀ ಓದಿ, ಬರೆದು ಅರ್ಥೈಸಿಕೊಂಡಿದ್ದನ್ನು ಕೆಲವೇ ತಾಸುಗಳಲ್ಲಿ ಬರೆಯಬೇಕಿರುತ್ತದೆ. ಪರೀಕ್ಷೆ ಬರೆಯಲು ಬೇಕಿರುವುದು ಆತ್ಮವಿಶ್ವಾಸ ಮಾತ್ರ. ಪರೀಕ್ಷೆ ಬಗ್ಗೆ ಅನಗತ್ಯ ಭಯ, ಆತಂಕಗಳನ್ನು ಹೊಂದಬಾರದು. ಪರೀಕ್ಷೆಯಲ್ಲಿ ರ‌್ಯಾಂಕ್ ಗಳಿಸುವುದೊಂದೇ ಜೀವನ ಏಕೈಕ ಸಾಧನೆಯಲ್ಲ. ಪರೀಕ್ಷೆ ಹೊರತಾದ ವಿಶಾಲವಾದ ಜಗತ್ತು ಇದೆ. ಪರೀಕ್ಷೆ, ಶೈಕ್ಷಣಿಕ ಜೀವನದಲ್ಲಿ ಅನ್ನುತ್ತೀರ್ಣರಾದವರು, ಜಸ್ಟ್ ಪಾಸ್ ಆಗಿರುವವರೂ ದೊಡ್ಡ ದೊಡ್ಡ ಸಂಶೋಧನೆ, ಆವಿಷ್ಕಾರ ಮಾಡಿದ್ದಾರೆ. ಲಕ್ಷಾಂತರ ಜನರಿಗೆ ಕೆಲಸ ಕೊಡುವ ಉದ್ಯಮಿಗಳಾಗಿ ಬೆಳೆದು ಹೆಸರು ಗಳಿಸಿದ್ದಾರೆ. ಕ್ರೀಡೆ, ಸಂಗೀತ, ಕಲೆ, ಸಾಹಿತ್ಯ ಸೇರಿ ಎಲ್ಲ ವಲಯಗಳಲ್ಲೂ ಶ್ರೇಷ್ಠರೆನಿಸಿಕೊಂಡಿದ್ದಾರೆ. ಹೀಗಾಗಿ, ಪರೀಕ್ಷೆಯನ್ನು ನಿರ್ಭೀತಿಯಿಂದ ಬರೆಯಬೇಕು’ ಎಂದು ಸಚಿವ ನಾಗೇಶ್ ನುಡಿದರು.

‘ಕ್ರೀಡೆ, ಸಂಗೀತ, ಕಲೆ ಸೇರಿದಂತೆ ಹತ್ತು ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಉನ್ನತ ಸ್ಥಾನಕ್ಕೆ ಏರಲು ವಿಫುಲ ಅವಕಾಶಗಳು ಇವೆ. ‘ರಾಷ್ಟ್ರೀಯ ಶಿಕ್ಷಣ ನೀತಿ-2020’ರಲ್ಲಿ ಮಕ್ಕಳ ಆಸಕ್ತಿಗಳು, ಅವರಲ್ಲಿರುವ ಪ್ರತಿಭೆಗೆ ಪ್ರೋತ್ಸಾಹ ನೀಡುವ ಅಂಶಗಳಿಗೆ ಒತ್ತು ನೀಡಲಾಗಿದೆ. ಹೀಗಾಗಿ, ರಾಷ್ಟ್ರೀಯ ಶಿಕ್ಷಣ ನೀತಿ-2020 ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆ ಮತ್ತು ಬದಲಾವಣೆ ತರುವ ವಿಶ್ವಾಸವಿದೆ’ ಎಂದು ನಾಗೇಶ್ ನುಡಿದರು.

‘ಯಾವುದೇ ಒತ್ತಡ ಇಲ್ಲದ ಹಬ್ಬದ ವೇಳೆ ಖುಷಿಯಾಗಿರುವಂತೆ ಪರೀಕ್ಷೆಗೂ ಖುಷಿಯಿಂದ ಹಾಜರಾಗಬೇಕು. ಶಿಕ್ಷಕರು ಮತ್ತು ಪಾಲಕರು ತಮ್ಮ ನನಸಾಗದ ಕನಸುಗಳನ್ನು ಈಡೇರಿಸುವಂತೆ ಮಕ್ಕಳ ಮೇಲೆ ಒತ್ತಡ ಹೇರಬಾರದು. ಮಕ್ಕಳು ಕಾಣುವ ಕನಸುಗಳಿಗೆ ನೀರೆರೆಯಬೇಕು. ನಿಮಗೆ ಖುಷಿ ನೀಡುವ ಕೆಲಸವನ್ನು ಶ್ರದ್ಧೆಯಿಂದ ಮಾಡಿದರೆ ಅತ್ಯುತ್ತಮವಾದ ಫಲಿತಾಂಶ ಸಿಗುತ್ತದೆ’ ಎಂದು ‘ಪರೀಕ್ಷಾ ಪೆ ಚರ್ಚಾ’ದಲ್ಲಿ ಪ್ರಧಾನಿಯವರು ಮಕ್ಕಳಿಗೆ ನೀಡಿದ ಸಲಹೆ ಸೂಚನೆಗಳನ್ನು ಸಚಿವ ನಾಗೇಶ್ ಅವರು ಉಲ್ಲೇಖಿಸಿದರು.

‘ಕೆಲವು ವಿದ್ಯಾರ್ಥಿಗಳು ತಮಗೆ ಇಂಗ್ಲೀಷ್ ಸರಿಯಾಗಿ ಬರುವುದಿಲ್ಲ. ಬರವಣಿಗೆ, ಓದಿನ ಮೇಲೆ ಹಿಡಿತ ಕಡಿಮೆ ಎಂಬ ಕೀಳರಿಮೆ ಹೊಂದಿರುತ್ತಾರೆ. ಅಂತಹ ಕೀಳರಿಮೆ ಬಿಡಬೇಕು. ಮಾತೃಭಾಷೆಯಲ್ಲೇ ವ್ಯಾಸಂಗ ಮಾಡಿ ಉನ್ನತ ಸ್ಥಾನಕ್ಕೆ ಹೋಗಲು ಸಾಧ್ಯವಿದೆ. ಮಾತೃ ಭಾಷೆಯನ್ನು ಹೆಮ್ಮೆಯಿಂದ ಮಾತನಾಡಬೇಕು ಮತ್ತು ಬಳಸಬೇಕು’ ಎಂದು ಸಚಿವ ನಾಗೇಶ್ ನುಡಿದರು.

‘ಈಗಾಗಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗಿವೆ. ಇದೇ ತಿಂಗಳಲ್ಲಿ ಪಿಯು ಪರೀಕ್ಷೆ ಆರಂಭವಾಗುತ್ತಿವೆ. ಪ್ರಶ್ನೆ ಪತ್ರಿಕೆ ನೋಡಿ ಆತಂಕಕ್ಕೊಳಗಾಗಬಾರದು. ಧೈರ್ಯದಿಂದ ಪರೀಕ್ಷೆ ಬರೆದರೆ ಯಶಸ್ಸು ಖಂಡಿತ ಸಿಗುತ್ತದೆ’ ಸಚಿವ ಬಿ.ಸಿ ನಾಗೇಶ್ ಹೇಳಿದರು.

ಭಗವದ್ಗೀತೆ ಸಾರಾಂಶ ತಿಳಿಸಿದ ಸಚಿವರು:

‘ಕುರುಕ್ಷೇತ್ರ ಯುದ್ಧದಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದ ಕೌರವರು ಮತ್ತು ತನ್ನ ಗುರುಗಳು, ಹಿರಿಯರು ಮತ್ತು ಸಂಬಂಧಿಗಳನ್ನು ನೋಡಿ ಅವರ ಮೇಲೆ ಯುದ್ಧವನ್ನು ಮಾಡುವುದು ಹೇಗೆ ಎಂಬ ಬಗ್ಗೆ ಆತಂಕ, ಗೊಂದಲ, ಹಿಂಜರಿಕೆಗಳನ್ನು ಅರ್ಜುನ ಹೊಂದಿದ್ದ. ಈ ಸಂದರ್ಭದಲ್ಲಿ ಅರ್ಜುನನ ಆತ್ಮ ವಿಶ್ವಾಸ ಕುಂದಿತ್ತು. ಆಗ, ಶ್ರೀಕೃಷ್ಣ ಪರಮಾತ್ಮ ಅರ್ಜುನನಿಗೆ ಧೈರ್ಯ ತುಂಬಲು ಅನೇಕ ಉದಾಹರಣೆಗಳ ಮೂಲಕ ಆತ್ಮ ವಿಶ್ವಾಸದ ಮಾತುಗಳನ್ನು ಹೇಳಿದ್ದರು. ಅದರ ಪರಿಣಾಮವೇ ದೊಡ್ಡ ಸಂಖ್ಯೆಯಲ್ಲಿದ್ದ ಕೌರವರ ಪಡೆಯನ್ನು ಧೈರ್ಯ ಮತ್ತು ವಿಶ್ವಾಸದಿಂದ ಪಾಂಡವರು ಎದುರಿಸಿ, ಜಯಶಾಲಿಯಾದರು. ವಿಶೇಷ ಶಕ್ತಿ ಸಾಮರ್ಥ್ಯಗಳನ್ನು ಹೊಂದಿದ್ದ ಅರ್ಜುನನೇ ಯುದ್ಧವೆಂಬ ಪರೀಕ್ಷೆಯನ್ನು ಎದುರಿಸುವ ಕುರಿತು ಹಿಂಜರಿಕೆ ಹೊಂದಿದ್ದರು. ಅಂತಹುದರಲ್ಲಿ ನಾವು, ನೀವು ಪರೀಕ್ಷೆಯ ಬಗ್ಗೆ ಭಯ, ಆತಂಕ ಪಡುವುದು ಸಹಜ. ಆದರೆ, ಅರ್ಜುನ ತನ್ನಲ್ಲಿದ್ದ ಗೊಂದಲಗಳನ್ನು ನಿವಾರಿಸಿಕೊಂಡು ಧೈರ್ಯ, ಆತ್ಮವಿಶ್ವಾಸಗಳನ್ನು ಮರಳಿ ಪಡೆದಂತೆ ನಾವೂ ಸಹ ಧೈರ್ಯ, ಆತ್ಮ ವಿಶ್ವಾಸ ಗಳಿಂದ ಇರಬೇಕು. ಗೆಲುವು, ಸೋಲಿನ ಬಗ್ಗೆ ಚಿಂತಿಸಬಾರದು. ವಿಶ್ವಾಸದಿಂದ ಮುನ್ನಡೆಯಬೇಕು’ ಎಂದು ಭಗವದ್ಗೀತೆಯ ಸಾರಾಂಶವನ್ನು ಮಕ್ಕಳಿಗೆ ತಿಳಿಸಿ ಪರೀಕ್ಷೆಯನ್ನು ಬರೆಯುವಂತೆ ಸಚಿವ ನಾಗೇಶ್ ಅವರು ಪ್ರೋತ್ಸಾಹಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!