ಹೊಸದಿಗಂತ ವರದಿ ವಿಜಯಪುರ:
ಪ್ರಧಾನಿ ನರೇಂದ್ರ ನೋದಿ ಜನ್ಮದಿನ ನಿಮಿತ್ತ ಸೆ.17 ರಿಂದ ಅ.2 ರ ವರೆಗೆ 15 ದಿನಗಳ ಕಾಲ ವಿಜಯಪುರದಲ್ಲಿ ಸೇವಾ ಪಾಕ್ಷಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುರೇಶ ಬಿರಾದಾರ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಸೂಚನೆಯಂತೆ ಸೇವಾ ಪಾಕ್ಷಿಕವನ್ನು ಹಮ್ಮಿಕೊಳ್ಳಲಾಗಿದ್ದು, 15 ದಿನಗಳ ಕಾಲ ಹಲವು ಸೇವಾ ಚಟುವಟಿಕೆಗಳನ್ನು ಕೈಗೊಂಡು, ಪ್ರಧಾನಿ ನರೇಂದ್ರ ಮೋದಿ ಅವರ ದೀರ್ಘಾಯುಷ್ಯ ಹಾಗೂ ಆರೋಗ್ಯಕ್ಕಾಗಿ ಪ್ರಾರ್ಥಿಸಲಾಗುವುದು ಎಂದರು.
ಸೇವಾ ಪಾಕ್ಷಿಕದಲ್ಲಿ ಆರೋಗ್ಯ ಉಚಿತ ತಪಾಸಣಾ ಶಿಬಿರ, ರಕ್ತದಾನ ಶಿಬಿರ, ವಿಶೇಷಚೇತನರಿಗೆ ಕೃತಕ ಕಾಲುಗಳ ಹಂಚಿಕೆ, ಕ್ಷಯ ರೋಗಿಗಳ ದತ್ತು ಪಡೆದು ಒಂದು ವರ್ಷ ಚಿಕಿತ್ಸೆ ನೀಡುವುದು, ಸ್ವಚ್ಛತಾ ಅಭಿಯಾನ, ಮಳೆ ನೀರು ಶೇಖರಣೆ ಬಗ್ಗೆ ಅರಿವು ಮೂಡಿಸುವುದು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಬಿಜೆಪಿ ಮುಖಂಡರಾದ ಚಂದ್ರಶೇಖರ ಕವಟಗಿ, ಕೃಷ್ಣಾ ಗುನ್ಹಾಳಕರ, ಶಿವರುದ್ರ ಬಾಗಲಕೋಟೆ, ಬಸವರಾಜ ಬೈಚಬಾಳ, ವಿಜಯ ಜೋಶಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.