ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ಭದ್ರತೆಯಲ್ಲಾದ ಲೋಪದ ಬಗ್ಗೆ ಅರ್ಜಿ ಆಲಿಸಿದ ಸುಪ್ರೀಂಕೋರ್ಟ್ ಸೋಮವಾರ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸುವಂತೆ ಆದೇಶಿಸಿದೆ.
ಇದೀಗ ಪಂಜಾಬ್ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳಿಂದ ನಡೆಯುತ್ತಿರುವ ಬೇರೆ ಬೇರೆ ತನಿಖೆಗಳನ್ನೆಲ್ಲ ನಿಲ್ಲಿಸುವಂತೆ ಹೇಳಿರುವ ಸುಪ್ರೀಂಕೋರ್ಟ್, ತಾನು ನೇಮಿಸಿದ ಸಮಿತಿ ವಿವರ ವರದಿ ಕೊಟ್ಟ ನಂತರ ಈ ಬಗ್ಗೆ ಮುಂದಿನ ಚರ್ಚೆ ನಡೆಸುವುದಾಗಿ ಹೇಳಿದೆ.
ಪಂಜಾಬ್ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಡಿ ಎಸ್ ಪಟ್ವಾಲಿಯಾ, ಕೇಂದ್ರದ ರೀತಿನೀತಿಗಳಿಗೆ ಆಕ್ಷೇಪ ಸಲ್ಲಿಸಿದರು. ರಾಜ್ಯದಲ್ಲಿ ಶೋಕಾಸ್ ನೋಟೀಸ್ ನೀಡಿರುವ ಪೊಲೀಸ್ ಅಧಿಕಾರಿಗಳಿಗೆ ಅವರ ಕಡೆಯಿಂದ ವಿವರಣೆ ಹೇಳುವ ಅವಕಾಶವನ್ನೇ ಕೊಟ್ಟಿಲ್ಲ ಎಂದು ಆಕ್ಷೇಪಿಸಿದರು.
ಕೇಂದ್ರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದವೆಂದರೆ- “ಪ್ರಧಾನಿ ಸಂಚಾರದ ವೇಳೆ ರಾಜ್ಯ ಪೊಲೀಸರು ಅನುಸರಿಸಬೇಕಾದ ನಿಯಮಗಳು ಎಸ್ ಪಿ ಜಿ ಬ್ಲೂಬುಕ್ ನಲ್ಲಿ ಸ್ಪಷ್ಟವಾಗಿವೆ. ಅವುಗಳ ಪಾಲನೆ ಆಗಿಲ್ಲ. ರಸ್ತೆಯ ಮೇಲೆ ಪ್ರತಿಭಟನಾಕಾರರಿದ್ದಾರೆ ಎಂದು ತಕ್ಷಣಕ್ಕೆ ಮಾಹಿತಿ ರವಾನಿಸಬೇಕಿರುವುದು ರಾಜ್ಯ ಪೊಲೀಸರ ಕರ್ತವ್ಯವಾಗಿತ್ತು. ಆದರೆ, ಪ್ರತಿಭಟನಾಕಾರರಿಗೆ ಕೇವಲ ನೂರು ಮೀಟರ್ ದೂರದಲ್ಲಿ ಪ್ರಧಾನಿ ವಾಹನ ನಿಲ್ಲುವಂತಾಯಿತು. ರಾಜ್ಯ ಸರ್ಕಾರವು ಈ ವಿಷಯದಲ್ಲಿ ಪೊಲೀಸರನ್ನು ರಕ್ಷಿಸಲು ಹೊರಟಿರುವುದೇ ಬಹಳ ಗಂಭೀರ ವಿಚಾರ.”
ಆದರೆ, ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಹೇಳಿದ್ದು ಹೀಗೆ- “ಕೇಂದ್ರದಿಂದ ಒಂದು ಕಡೆ ನೀವು ಎಸ್ ಪಿ ಜಿ ಶಿಷ್ಟಾಚಾರ ಉಲ್ಲಂಘನೆಯಾಗಿದೆಯಾ ಎಂದು ತನಿಖೆ ನಡೆಸುವುದಕ್ಕೆ ಸಮಿತಿ ಮಾಡುತ್ತೀರಿ. ಇನ್ನೊಂದೆಡೆ, ರಾಜ್ಯದ ಮುಖ್ಯ ಕಾರ್ಯದರ್ಶಿ ಹಾಗೂ ಡಿಜಿ ತಪ್ಪಿತಸ್ಥರೆಂದು ಘೋಷಿಸುತ್ತೀರಿ. ತನಿಖೆಗೂ ಮೊದಲೇ ಹೇಗೆ ನಿರ್ಧರಿಸುವಿರಿ. ಇದು ವಿರೋಧಾಭಾಸ.” ಹೀಗೆಂದು ಹೇಳಿ ತನ್ನದೇ ನಿಗಾದ ಸಮಿತಿ ರಚನೆಗೆ ಸುಪ್ರೀಂಕೋರ್ಟ್ ಆದೇಶಿಸಿದೆ.