ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಡಿಶಾದಲ್ಲಿ ಕೋರಮಂಡಲ್ ಎಕ್ಸ್ಪ್ರೆಸ್ ರೈಲು ಅಪಘಾತದ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಭೀಕರ ಅಪಘಾತದಲ್ಲಿ 292 ಮಂದಿ ಮೃತಪಟ್ಟಿದ್ದಾರೆ. ಬರೋಬ್ಬರಿ 900ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಇಂದು ಎಲ್ಲಾ ಕಾರ್ಯಕ್ರಮ ರದ್ದುಗೊಳಿಸಿರುವ ಪ್ರಧಾನಿ ಮೋದಿ ದುರಂತ ಘಟನಾ ಸ್ಥಳಕ್ಕೆ ಮೋದಿ ಭೇಟಿ ನೀಡಿದ್ದಾರೆ. ಘಟನಾ ಸ್ಥಳದಲ್ಲಿ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೇ ಅಧಿಕಾರಿಗಳು ಅಪಘಾತದ ಮಾಹಿತಿಯನ್ನು ಮೋದಿಗೆ ನೀಡಿದ್ದಾರೆ. ಸುಮಾರು 40 ನಿಮಿಷಗಳ ಕಾಲ ಘಟನಾ ಸ್ಥಳದಲ್ಲಿದ್ದ ಮೋದಿ, ಭೀಕರ ಅಪಘಾತದ ಇಂಚಿಂಚು ಮಾಹಿತಿ ಪಡೆದಿದ್ದಾರೆ.
ದುರಂತ ಸ್ಥಳ ಕಂಡು ತೀವ್ರ ನೋವು ವ್ಯಕ್ತಪಡಿಸಿದ್ದಾರೆ. ಭೀಕರ ಅಪಘಾತದ ಸಂಭವಿಸಿದ್ದು ಹೇಗೆ? ಕಾರಣಗಳೇನು ಅನ್ನೋ ಕುರಿತು ಮೋದಿ(PM Modi) ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಅಪಘಾತವಾಗದೇ ಇರಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮೋದಿ ಚರ್ಚಿಸಿದ್ದಾರೆ.
ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಜೊತೆ ಮಾತನಾಡಿದ ಮೋದಿ, ಘಟನೆಯ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ.
ಘಟನಾ ಸ್ಥಳ ಭೇಟಿ ಬಳಿಕ ಪ್ರಧಾನಿ ಮೋದಿ, ಕಟಕ್ನಲ್ಲಿ ಆಸ್ಪತ್ರೆಗೆ ತೆರಳಲಿದ್ದಾರೆ. ರೈಲು ದುರಂತದಲ್ಲಿ ಗಾಯಗೊಂಡ 900ಕ್ಕೂ ಹೆಚ್ಚು ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮೋದಿ ಕಟಕ್ನಲ್ಲಿ ಗಾಯಳುಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಲಿದ್ದಾರೆ.
ಒಡಿಶಾದ ಬಾಲಸೋರ್ ಬಳಿ 3 ರೈಲುಗಳು ಅಪಘಾತಕ್ಕೆ ಈಡಾದ ಬೆನ್ನಲ್ಲೇ ತಮ್ಮೆಲ್ಲ ಅಧಿಕೃತ ಪ್ರವಾಸ ರದ್ದುಗೊಳಿಸಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಘಟನಾ ಸ್ಥಳಕ್ಕೆ ಶುಕ್ರವಾರ ತಡರಾತ್ರಿಯೇ ದೌಡಾಯಿಸಿದರು. ಅಲ್ಲದೆ, ಶನಿವಾರದ ಗೋವಾ-ಮುಂಬೈ ವಂದೇಭಾರತ್ ರೈಲು ಉದ್ಘಾಟನಾ ಕಾರ್ಯಕ್ರಮವನ್ನೂ ರದ್ದುಗೊಳಿಸಿದರು.