ಹೊಸದಿಗಂತ ಡಿಜಿಟಲ್ ಡೆಸ್ಕ್:
26/11ರ ಮುಂಬೈ ಭಯೋತ್ಪಾದನಾ ದಾಳಿಯ ಪ್ರಮುಖ ಸಂಚುಕೋರರು ಮತ್ತು ಯೋಜಕರು ರಕ್ಷಿಸಲ್ಪಟ್ಟಿದ್ದಾರೆ ಮತ್ತು ಶಿಕ್ಷೆಗೊಳಗಾಗದೆ ಉಳಿದಿದ್ದಾರೆ, ಇದು ಸಾಮೂಹಿಕ ವಿಶ್ವಾಸಾರ್ಹತೆಗೆ ಧಕ್ಕೆ ತಂದಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
ಕೆಲವು ಭಯೋತ್ಪಾದಕರನ್ನು ನಿಷೇಧಿಸುವ ವಿಷಯಕ್ಕೆ ಬಂದಾಗ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು (ಯುಎನ್ಎಸ್ಸಿ) ಒಂದು ರಾಷ್ಟ್ರದ ರಾಜಕೀಯ ಪರಿಗಣನೆಯಿಂದ ಕೆಲವು ಸಂದರ್ಭಗಳಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗದೇ ಇರುವುದು ವಿಷಾದನೀಯ ಎಂದು ಪರೋಕ್ಷವಾಗಿ ಚೀನಾಗೆ ಚಾಟಿ ಬೀಸಿದ್ದಾರೆ.
‘ಭಯೋತ್ಪಾದಕ ಉದ್ದೇಶಗಳಿಗಾಗಿ ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಬಳಕೆಯನ್ನು ಎದುರಿಸುವುದು’ ಕುರಿತು ಮುಂಬೈನ ತಾಜ್ ಹೊಟೆಲ್ ನಲ್ಲಿ ನಡೆದ ವಿಶೇಷ ಸಭೆಯಲ್ಲಿ ವಿದೇಶಾಂಗ ಸಚಿವರು ಮಾತನಾಡುತ್ತಿದ್ದರು.
“26/11 ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಕೋರರು ಮತ್ತು ಯೋಜಕರು ರಕ್ಷಿಸಲ್ಪಟ್ಟಿದ್ದಾರೆ ಮತ್ತು ಶಿಕ್ಷಿಸಲ್ಪಟ್ಟಿಲ್ಲ. ಇದು ಸಾಮೂಹಿಕ ವಿಶ್ವಾಸಾರ್ಹತೆ ಮತ್ತು ಸಾಮೂಹಿಕ ಆಸಕ್ತಿಯನ್ನು ದುರ್ಬಲಗೊಳಿಸುತ್ತದೆ. 26/11ರ ಆಘಾತಕಾರಿ ದಾಳಿಯು ಮುಂಬೈ ಮಾತ್ರವಲ್ಲ ಅಂತರರಾಷ್ಟ್ರೀಯ ಸಮುದಾಯದ ಮೇಲೆ ನಡೆದ ದಾಳಿಯಾಗಿದೆ” ಎಂದು ಹೇಳಿದ್ದಾರೆ. ಅಲ್ಲದೇ “ಗಡಿಯಾಚೆಗಿಂದ ಬಂದ ಭಯೋತ್ಪಾದಕರು ಇಡೀ ನಗರವನ್ನು ಒತ್ತೆಯಾಳಾಗಿ ಇರಿಸಿದ್ದರು” ಎಂದು ಪಾಕಿಸ್ತಾನದ ಹೆಸರನ್ನು ಉಲ್ಲೇಖಿಸಿದೆ ವಾಗ್ದಾಳಿ ನಡೆಸಿದ್ದಾರೆ. ದಾಳಿಯಲ್ಲಿ 140 ಭಾರತೀಯರು ಮತ್ತು 23 ದೇಶಗಳ 26 ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ.
ಈ ಸಂದರ್ಭದಲ್ಲಿ ಜೈಶಂಕರ್, ಮೈಕೆಲ್ ಮೌಸಾ, ಗ್ಯಾಬೊನೀಸ್ ವಿದೇಶಾಂಗ ಸಚಿವ ಮತ್ತು ಯುಎನ್ ಭದ್ರತಾ ಮಂಡಳಿಯ ಅಧ್ಯಕ್ಷರು ಮತ್ತು ಅಂತರಾಷ್ಟ್ರೀಯ ಸಮುದಾಯದ ಸದಸ್ಯರು ಸಹ 26/11 ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಸಂತ್ರಸ್ತರಿಗೆ ಶ್ರದ್ಧಾಂಜಲಿ ಸಲ್ಲಿಸಿದರು ಎಂದು ಮೂಲಗಳು ವರದಿ ಮಾಡಿವೆ.