ಹೊಸದಿಗಂತ ವರದಿ ಅಂಕೋಲಾ :
ಮಂಜಗುಣಿ-ಗಂಗಾವಳಿ ನಡುವಿನ ಸೇತುವೆ ನಿರ್ಮಾಣ ಹಾಗೂ ಕೋಡ್ಸಣಿಯಲ್ಲಿ ಸೇತುವೆ ನಿರ್ಮಾಣಕ್ಕೆ ಹಾಕಲಾದ ಬೃಹತ್ ಪ್ರಮಾಣದ ಮಣ್ಣಿನಿಂದ ಮಳೆಗಾಲದಲ್ಲಿ ಕೃತಕ ನೆರೆ ಉಂಟಾಗುವುದರಿಂದ ಈ ಮಣ್ಣನ್ನು ತುರ್ತಾಗಿ ತೆಗೆಸುವಂತೆ ಒತ್ತಾಯಿಸಿ ಶುಕ್ರವಾರ ಬೆಳಿಗ್ಗೆ ೧೧ ಗಂಟೆಗೆ ವಿವಿಧ ಸಂಘಟನೆಗಳ ಪ್ರಮುಖರು ಪ್ರತಿಭಟನೆ ನಡೆಸಿದರು.
ನಂತರ ಸ್ಥಳಕ್ಕೆ ಭೇಟಿ ನೀಡಿದ್ದ ತಹಸೀಲ್ದಾರ್ ಉದಯ ಕುಂಬಾರ್ ಮತ್ತು ಸಿಪಿಐ ಸಂತೋಷ ಶೆಟ್ಟಿ ಕಾಮಗಾರಿಯ ಗುತ್ತಿಗೆದಾರ ಇಂಜಿನಿಯರ್ ಜೊತೆಗೆ ಮಾತನಾಡಿ ಮಧ್ಯಾಹ್ನ ೩.೩೦ ಗಂಟೆಗೆ ಈ ಸಮಸ್ಯೆ ಬಗೆಹರಿಸುವ ಹಿನ್ನೆಲೆಯಲ್ಲಿ ವಿಶೇಷ ಸಭೆಯನ್ನು ತಹಸೀಲ್ದಾರ್ ಕಚೇರಿಯಲ್ಲಿ ಆಯೋಜನೆ ಮಾಡಲಾಯಿತು. ಈ ಸಭೆಯಲ್ಲಿ ಗುತ್ತಿಗೆದಾರರು, ವಿವಿಧ ಸಂಘಟನೆ ಪ್ರಮುಖರು , ಅಧಿಕಾರಿಗಳು ಪಾಲ್ಗೊಳ್ಳುವರು.
ಇನ್ನು ೩-೪ ದಿನದಲ್ಲಿ ಮಳೆ ಜಿಲ್ಲೆಯನ್ನು ಪ್ರವೇಶ ಮಾಡುವ ಹಿನ್ನೆಲೆಯಲ್ಲಿ ತುರ್ತಾಗಿ ಮಣ್ಣನ್ನು ಬಾರ್ಜ್ ಬಳಸಿ ತೆಗೆಯಬೇಕು. ಇಲ್ಲದಿದ್ದರೆ ಕಳೆದ ಬಾರಿಯಂತೆ ಕೃತಕ ನೆರೆ ಉಂಟಾಗಿ ವಸತಿ ಪ್ರದೇಶದಲ್ಲಿ ಅಪಾರ ಪ್ರಮಾಣದಲ್ಲಿ ಹಾನಿಯಾಗಲಿದೆ ಎಂದು ಪ್ರತಿಭಟನಾಕಾರರು ಆರೋಪ ಮಾಡಿದರು. ಗುತ್ತಿಗೆದಾರರ ಪ್ರತಿನಿಧಿ ಮಣ್ಣು ತೆಗೆದುವ ಬಗ್ಗೆ ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ ಸಂಜೆ ಮಹತ್ವದ ಸಭೆ ಇಡಲಾಗಿದೆ.
ಪುನೀತ ರಾಜಕುಮಾರ ಅಭಿಮಾನಿ ಬಳಗದ ಅಧ್ಯಕ್ಷ ನಾಗರಾಜ ಮಂಜಗುಣಿ, ಗೌರವಾಧ್ಯಕ್ಷ ಶ್ರೀಪಾದ ನಾಯ್ಕ, ಪ್ರಧಾನ ಕಾರ್ಯದರ್ಶಿ ಪ್ರಶಾಂತ ನಾಯ್ಕ, ನವೋದಯ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಮಧುಕರ ಗೌಡ, ಕಾರ್ಯದರ್ಶಿ ಮಂಜುನಾಥ ಗೌಡ, ಪ್ರಮುಖರಾದ ಬೀರಾ ಗೌಡ, ರಮೇಶ ಗೌಡ, ಜಿಲ್ಲಾ ಗ್ರಾಮೀಣ ಯುವ ಹೋರಾಟ ಸಮಿತಿಯ ಅಧ್ಯಕ್ಷ ದೇವರಾಯ ನಾಯಕ, ಪ್ರಾಂತ ರೈತ ಸಂಘದ ಕಾರ್ಯದರ್ಶಿ ಶಾಂತಾರಾಮ ನಾಯಕ, ಹೊನ್ನೆಬೈಲ್ ಗ್ರಾ.ಪಂ ಅಧ್ಯಕ್ಷ ಮಹಾದೇವ ಗೌಡ ಪಾಲ್ಗೊಂಡಿದ್ದರು.