ಹೊಸದಿಗಂತ ಡಿಜಿಟಲ್ ಡೆಸ್ಕ್:
ನೀಟ್ ಪರೀಕ್ಷಾ ಪತ್ರಿಕೆ ಸೋರಿಕೆ ಖಂಡಿಸಿ CJP ಹಾಗೂ ಸಾವಿರಾರು ವಿದ್ಯಾರ್ಥಿಗಳು ದೆಹಲಿಯ ಜಂತರ್ ಮಂತರ್ನಲ್ಲಿ ನಡೆಸುತ್ತಿದ್ದ ಆಂದೋಲನದ ವೇಳೆ ನಡೆದ ದೆಹಲಿ ಪೊಲೀಸರ ಲಾಠಿಚಾರ್ಜ್ ಪ್ರಕರಣವನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಸ್ವೀಕರಿಸಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನ್ ಅವರನ್ನೊಳಗೊಂಡ ತ್ರಿಪೀಠವು ಈ ಕುರಿತು ಪ್ರಮುಖ ಮೌಖಿಕ ಅಭಿಪ್ರಾಯಗಳನ್ನು ಹಂಚಿಕೊಂಡಿದೆ.
ಸಂವಿಧಾನಬದ್ಧ ಹಕ್ಕು ಹಾಗೂ ಶಿಸ್ತಿನ ಅಗತ್ಯ
ಪ್ರಜೆಗಳಿಗೆ ಶಾಂತಿಯುತ ಹಾಗೂ ಕಾನೂನುಬದ್ಧವಾಗಿ ಹಕ್ಕುಗಳನ್ನು ಪ್ರತಿಪಾದಿಸುವ ಹಕ್ಕಿದೆ ಎಂದು ಸಿಜೆಐ ಸೂರ್ಯ ಕಾಂತ್ ಸ್ಪಷ್ಟಪಡಿಸಿದರು. ಕೇವಲ ಪ್ರತಿಭಟನೆ ಎಂಬ ಕಾರಣಕ್ಕೆ ಮಿತಿಮೀರಿದ ಬಲಪ್ರಯೋಗ ಅಥವಾ ಲಾಠಿಚಾರ್ಜ್ ಮಾಡುವುದನ್ನು ಒಪ್ಪಲಾಗುವುದಿಲ್ಲ ಎಂದ ಅವರು, ಈ ದೌರ್ಜನ್ಯದ ಬಗ್ಗೆ ಸ್ವತಂತ್ರ ತನಿಖೆ ನಡೆಸುವ ಅಗತ್ಯವಿದೆ ಎಂದರು. ಜೊತೆಗೆ, ಪ್ರತಿಭಟನೆ ನಿರ್ವಹಣೆಯಲ್ಲಿ ದೇಶಾದ್ಯಂತ ಏಕರೂಪದ ಪೊಲೀಸ್ ಶಿಷ್ಟಾಚಾರ ಜಾರಿಗೆ ತರಬೇಕೆಂದು ಪ್ರತಿಪಾದಿಸಿದರು.
ವಿದ್ಯಾರ್ಥಿ ಹಾಗೂ ಪೊಲೀಸರ ಸುರಕ್ಷತೆಗೆ ಆದ್ಯತೆ
ಘಟನೆಯಲ್ಲಿ ಗಾಯಗೊಂಡ ಪೊಲೀಸ್ ಸಿಬ್ಬಂದಿಯ ವಕೀಲರಿಗೂ ವಾದ ಮಂಡಿಸಲು ಅವಕಾಶ ನೀಡಿದ ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ, “ವಿದ್ಯಾರ್ಥಿಗಳಾಗಲಿ ಅಥವಾ ಪೊಲೀಸರಾಗಲಿ, ಪ್ರತಿಯೊಬ್ಬರ ಜೀವ ಮತ್ತು ಸುರಕ್ಷತೆ ಅತ್ಯಂತ ಮುಖ್ಯ” ಎಂದರು. ಕರ್ತವ್ಯನಿರತ ಪೊಲೀಸರಿಗೆ ಸೂಕ್ತ ಹೆಲ್ಮೆಟ್ ಹಾಗೂ ರಕ್ಷಣಾ ಉಪಕರಣಗಳನ್ನು ಒದಗಿಸದ ರಾಜ್ಯ ಸರ್ಕಾರಗಳನ್ನು ಪೀಠವು ಪ್ರಶ್ನಿಸಲಿದೆ. ವಾರಗಳ ಕಾಲ ನಡೆದ ಈ ಆಂದೋಲನದಲ್ಲಾದ ಬಲಪ್ರಯೋಗದ ಕುರಿತು ನ್ಯಾಯಾಲಯ ತೀವ್ರ ಕಾಳಜಿ ವ್ಯಕ್ತಪಡಿಸಿದೆ.



