ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಫಘಾನಿಸ್ಥಾನದಲ್ಲಿ ಕೊಲೆಗೀಡಾದ ಭಾರತದ ಪ್ರಸಿದ್ಧ ಫೋಟೋ ಜರ್ನಲಿಸ್ಟ್ ಡ್ಯಾನಿಶ್ ಸಿದ್ಧಿಕಿ ಸೇರಿದಂತೆ ಇತರ ಮೂರು ಭಾರತೀಯರು ಪ್ರಸಿದ್ಧ ʼಪುಲಿಟ್ಜರ್ʼ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ರಾಯಿಟರ್ಸ್ ಸುದ್ದಿ ಸಂಸ್ಥೆಯ ಢ್ಯಾನಿಶ್ ಸಿದ್ಧಿಕಿ ಮತ್ತು ಅವರ ಸಹೋದ್ಯೋಗಿಗಳಾದ ಅದ್ನಾನ್ ಅಬಿದಿ, ಸನ್ನಾ ಇರ್ಷಾದ್ ಮಟ್ಟೂ ಮತ್ತು ಅಮಿತ್ ದಾವೆ ಅವರಿಗೆ ಕೊಲಂಬಿಯಾ ವಿವಿಯಿಂದ ಕೊಡಮಾಡುವ ʼಪುಲಿಟ್ಜರ್ʼ ಪ್ರಶಸ್ತಿ ಘೋಷಣೆಯಾಗಿದೆ. “ಭಾರತದ ಕೋವಿಡ್ ಪರಿಸ್ಥಿತಿಯ ಬಗ್ಗೆ ಅವರ ಛಾಯಾಚಿತ್ರಗಳು ವೀಕ್ಷಕರಿಗೆ ಉನ್ನತ ಪ್ರಜ್ಞೆಯನ್ನು ಕಟ್ಟಿಕೊಡುತ್ತದೆ. ಆತ್ಮೀಯತೆ ಮತ್ತು ವಿನಾಶ ಎರಡನ್ನು ಸಮತೋಲಿತವಾಗಿ ಛಾಯಾಚಿತ್ರಗಳನ್ನು ಸೆರೆ ಹಿಡಿಯಲಾಗಿದೆ”ಎಂದು ಪುಲಿಟ್ಜರ್ ಪ್ರಶಸ್ತಿಯ ವೆಬ್ ಸೈಟ್ ನಲ್ಲಿ ಪ್ರಶಂಸಿಸಲಾಗಿದೆ.
ಇದು ಡ್ಯಾನಿಶ್ ಸಿದ್ಧಿಕಿಯವರಿಗೆ ದೊರೆಯುತ್ತಿರುವ ಎರಡನೇ ʼಪುಲಿಟ್ಜರ್ʼ ಪ್ರಶಸ್ತಿಯಾಗಿದೆ. ಈ ಹಿಂದೆ 2018ರಲ್ಲಿ ಅವರಿಗೆ ಪ್ರಶಸ್ತಿ ಸಂದಿತ್ತು. 2021ರಲ್ಲಿ ಅಪಘಾನಿಸ್ಥಾನದ ರಕ್ಷಣಾಪಡಗಳು ಮತ್ತು ತಾಲಿಬಾನ್ ನಡುವಿನ ಸಂಘರ್ಷವನ್ನು ಸೆರೆಹಿಡಿಯಲೆಂದು ಅಪಘಾನಿಸಸ್ಥಾನಕ್ಕೆ ತೆರಳಿದ್ದ ಸಿದ್ಧಿಕಿ ಅಲ್ಲಿಯ ಕಂದಾಹಾರ್ ಕಣಿವೆಯಲ್ಲಿ ಹತರಾಗಿದ್ದರು. ಪ್ರಸ್ತುತ ಅವರಿಗೆ ಮರಣೋತ್ತರ ಪ್ರಶಸ್ತಿ ಘೋಷಣೆಯಾಗಿದೆ.