ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಾಂಧಿ ಕುಟುಂಬದಿಂದ ಯಾರೂ ಪಕ್ಷದ ಮುಂದಿನ ಅಧ್ಯಕ್ಷರಾಗಬಾರದು ಎಂದು ಪಕ್ಷದ ನಾಯಕ ರಾಹುಲ್ ಗಾಂಧಿ ಸ್ಪಷ್ಟಪಡಿಸಿದ್ದಾರೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯ ಕದನ ತೀವ್ರಗೊಳ್ಳುತ್ತಿರುವಂತೆಯೇ ರಾಹುಲ್ ಈ ಹೇಳಿಕೆ ನೀಡಿದ್ದಾರೆ ಎಂದು ಮೂಲಗಳು ವರದಿ ಮಾಡಿದ್ದಾರೆ.
ಶುಕ್ರವಾರ ಕೇರಳದಲ್ಲಿ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಗೆಹ್ಲೋಟ್, “ಕಾಂಗ್ರೆಸ್ ಅಧ್ಯಕ್ಷರಾಗಲು ಎಲ್ಲರ ಪ್ರಸ್ತಾಪವನ್ನು ಒಪ್ಪಿಕೊಳ್ಳುವಂತೆ ನಾನು ಅವರಿಗೆ (ರಾಹುಲ್ ಗಾಂಧಿ) ಹಲವು ಬಾರಿ ಮನವಿ ಮಾಡಿದ್ದೇನೆ, ಗಾಂಧಿ ಕುಟುಂಬದ ಯಾರೂ ಮುಂದಿನ ಮುಖ್ಯಸ್ಥರಾಗಬಾರದು ಎಂದು ಅವರು ಸ್ಪಷ್ಟಪಡಿಸಿದ್ದಾರೆ” ಎಂದು ಹೇಳಿದ್ದಾರೆ. ಶೀಘ್ರದಲ್ಲೇ ಚುನಾವಣೆಗೆ ನಾಮಪತ್ರ ಸಲ್ಲಿಸುವುದಾಗಿ ಗೆಹ್ಲೋಟ್ ತಿಳಿಸಿದ್ದಾರೆ. ದೇಶದ ಸದ್ಯದ ಸ್ಥಿತಿಯನ್ನು ಗಮನಿಸಿದರೆ ಪ್ರತಿಪಕ್ಷಗಳು ಬಲಿಷ್ಠವಾಗಬೇಕಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಅಶೋಕ್ ಗೆಹ್ಲೋಟ್ ಮತ್ತು ಪಕ್ಷದ ಸಂಸದ ಶಶಿ ತರೂರ್ ಅವರು ಮುಂಬರುವ ಚುನಾವಣೆಗೆ ಸಂಭಾವ್ಯ ಸ್ಪರ್ಧಿಗಳಾಗಿದ್ದಾರೆ. ಆದಾಗ್ಯೂ, ದೇಶಾದ್ಯಂತ ಕಾಂಗ್ರೆಸ್ ಸಮಿತಿಗಳು ಸಭೆಗಳನ್ನು ನಡೆಸುತ್ತಿವೆ, ಅದರಲ್ಲಿ “ಮುಂಬರುವ ಕಾಂಗ್ರೆಸ್ ಅಧ್ಯಕ್ಷರಿಗೆ ಪಿಸಿಸಿ ಮತ್ತು ಎಐಸಿಸಿ ಸದಸ್ಯರನ್ನು ನೇಮಿಸಲು ನಾವು ಅಧಿಕಾರ ನೀಡುತ್ತೇವೆ” ಎಂಬ ನಿರ್ಣಯವನ್ನು ಅಂಗೀಕರಿಸಲಾಗಿದೆ.
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅಕ್ಟೋಬರ್ 17 ರಂದು ಚುನಾವಣೆ ನಡೆಯಲಿದ್ದು, ಅಕ್ಟೋಬರ್ 19 ರಂದು ಮತ ಎಣಿಕೆ ನಡೆಯಲಿದೆ.