ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲೋಕಸಭೆಯ ಸಂಸದರಾಗಿ ಮರುಸೇರ್ಪಡೆಯಾದ ನಂತರ ಮೊದಲ ಬಾರಿಗೆ ತಮ್ಮ ತವರು ಕ್ಷೇತ್ರ ಕೇರಳದ ವಯನಾಡ್ಗೆ ಭೇಟಿ ನೀಡಿದರು.
ಶುಕ್ರವಾರ ರಾತ್ರಿ ದೆಹಲಿಯಿಂದ ವಯನಾಡ್ಗೆ ತೆರಳಿದ್ದು, ಎರಡು ದಿನಗಳ ಕಾಲ ವಾಸ್ತವ್ಯ ಹೂಡಲಿದ್ದಾರೆ. ಈಗಾಗಲೇ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯು ರಾಹುಲ್ ಗಾಂಧಿ ಸ್ವಾಗತಕ್ಕೆ ಅದ್ದೂರಿ ವೇದಿಕೆ ಸಿದ್ಧಪಡಿಸಿದೆ. ಜಿಲ್ಲಾ ಕಾಂಗ್ರೆಸ್ ಸಮಿತಿ ಸಭೆಯಿದ್ದು, ಆಗಸ್ಟ್ 12 ಮತ್ತು 13 ರಂದು ರಾಹುಲ್ ಗಾಂಧಿ ಹಾಜರಾಗಲಿದ್ದಾರೆ.
ರಾಹುಲ್ ಗಾಂಧಿ ವಯನಾಡು ಕ್ಷೇತ್ರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಅದ್ಧೂರಿ ಸ್ವಾಗತ ನೀಡಲು ಭವ್ಯ ವ್ಯವಸ್ಥೆ ಮಾಡಲಾಗಿದೆ ಎಂದು ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ವಿಟಿ ಸಿದ್ದಿಕಿ ತಿಳಿಸಿದ್ದಾರೆ. ರಾಹುಲ್ ಜಿಲ್ಲಾ ಕಾಂಗ್ರೆಸ್ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ರಾಹುಲ್ಗೆ ಸಂಸದೀಯ ಸದಸ್ಯತ್ವ ನೀಡುವುದರೊಂದಿಗೆ ತುಘಲಕ್ ಲೇನ್ ಬಂಗಲೆಯನ್ನೂ ಮರು ಹಂಚಿಕೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ತಮ್ಮ ಸ್ವಕ್ಷೇತ್ರ ವಯನಾಡಿನ ಜನರನ್ನು ಭೇಟಿಯಾಗಲು ಆಗಮಿಸುತ್ತಿರುವ ರಾಹುಲ್ ಗಾಂಧಿ ಅವರ ಸಮಸ್ಯೆಗಳ ಬಗ್ಗೆ ವಿಚಾರಿಸಲಿದ್ದಾರೆ.