ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ಆಳುವ ಸಿಪಿಎಂನ ವಿದ್ಯಾರ್ಥಿ ಸಂಘಟನೆ ಭಾರತೀಯ ವಿದ್ಯಾರ್ಥಿ ಫೆಡರೇಶನ್(ಎಸ್ಎಫ್ಐ)ನ ಕಾರ್ಯಕರ್ತರು ಕೇರಳದ ವಯನಾಡಿನ ಕಲ್ಪೆಟ್ಟಾದಲ್ಲಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಸಂಸದರ ಕಚೇರಿ ಕಡೆಗೆ ಶುಕ್ರವಾರ ಮಧ್ಯಾಹ್ನ ನಡೆಸಿದ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿದ್ದು, ಕಚೇರಿಗೆ ನುಗ್ಗಿ ಕಟ್ಟಡದ ಬಾಗಿಲು, ಕಿಟಕಿಗಳನ್ನು ಧ್ವಂಸಗೊಳಿಸಿದ್ದಾರೆ.
ಗುಡ್ಡಗಾಡು ಪ್ರದೇಶ ವಯನಾಡಿನಲ್ಲಿ ಚರ್ಚೆಗೆ ಕಾರಣವಾಗಿರುವ ಪರಿಸರ ಸೂಕ್ಷ್ಮ ವಲಯ(ಇಎಸ್ಝಡ್) ವಿಚಾರದಲ್ಲಿ ಸಂಸದರು ಮಧ್ಯಪ್ರವೇಶಿಸದಿರುವುದರ ವಿರುದ್ಧ ಎಸ್ಎಫ್ಐ ಈ ಪ್ರತಿಭಟನಾ ಮೆರವಣಿಗೆ ನಡೆಸಿತು. ಈ ವೇಳೆ ಎಸ್ಎಫ್ಐ ವಿದ್ಯಾರ್ಥಿಗಳು ಪೊಲೀಸರ ಸೂಚನೆಗಳನ್ನು ಧಿಕ್ಕರಿಸಿ ರಾಹುಲ್ಗಾಂಧಿ ಅವರ ಕಚೇರಿಗೆ ನುಗ್ಗಿ ಕಿಟಕಿ ಗಾಜುಗಳನ್ನು ಒಡೆದು ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದು,ಈ ದಾಂಧಲೆಯಲ್ಲಿ ಸಂಸದರ ಕಚೇರಿ ಸಿಬ್ಬಂದಿ ಆಗಸ್ಟಿನ್ ಎಂಬವರಿಗೂ ಗಾಯಗಳಾಗಿವೆ.
ಸಿಪಿಎಂ ಗೂಂಡಾರಾಜ್: ಕೈ ಖಂಡನೆ
ಕೊನೆಗೆ ಪೊಲೀಸರು ಲಾಠಿ ಪ್ರಹಾರ ನಡೆಸಿ ಪ್ರತಿಭಟನಾಕಾರರನ್ನು ನಿಯಂತ್ರಿಸಬೇಕಾಯಿತು. ಕೇರಳದಲ್ಲಿ ಆಳುವ ಸಿಪಿಎಂ ಸಂಘಟಿತ ಮಾಫಿಯಾವಾಗಿ ಮಾರ್ಪಟ್ಟಿದೆ ಎಂದು ಆರೋಪಿಸಿರುವ ಕೇರಳದ ವಿಪಕ್ಷ ನಾಯಕ ವಿ.ಡಿ.ಸತೀಶನ್ , ಇದು ಕೇರಳದಲ್ಲಿರುವ ಗೂಂಡಾರಾಜ್ನ್ನು ಎತ್ತಿತೋರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.