ಹೊಸದಿಗಂತ ಡಿಜಿಟಲ್ ಡೆಸ್ಕ್
ರಾಹುಲ್ ಗಾಂಧಿ ಅವರನ್ನು ನಾನು ಅಮೇಠಿಯಿಂದ ಸೋಲಿಸಿ ಕಳುಹಿಸಿದಾಗಿನಿಂದ ಅವರು ದೇಶಾದ್ಯಂತ ಓಡುತ್ತಿದ್ದಾರೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಕಾಂಗ್ರೆಸ್ನ ‘ಭಾರತ್ ಜೋಡೋ ಯಾತ್ರೆ’ ಗೆ ಟಾಂಗ್ ನೀಡಿದ್ದಾರೆ.
ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಭದ್ರಕೋಟೆಯಾದ ಅಮೇಥಿಯಲ್ಲಿ ಇರಾನಿ ವಿರುದ್ಧ ಸೋತಿದ್ದರು, ಆದರೆ ಇನ್ನೊಂದು ಕ್ಷೇತ್ರವಾದ ಕೇರಳದ ವಯನಾಡ್ನಿಂದ ಗೆದ್ದಿದ್ದರು.
“ಆದರೆ ಅವರು ಹೋದಲ್ಲೆಲ್ಲಾ ಕಾಂಗ್ರೆಸ್ ಚುನಾವಣೆಯಲ್ಲಿ ಸೋಲುತ್ತಲೇ ಇದೆ” ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಇರಾನಿ ವ್ಯಂಗ್ಯವಾಡಿದ್ದಾರೆ.
ಹಿಮಾಚಲ ವಿಧಾನಸಭಾ ಚುನಾವಣೆ ಸ್ಫರ್ಧಿ ರೇಣುಕಾಜಿ ಅವರ ಪರ ವಿಧಾನಸಭಾ ಚುನಾವಣಾ ರ್ಯಾಲಿ ಯನ್ನು ಉದ್ದೇಶಿಸಿ ಅವರು ಮಾತನಾಡಿದರು. “ಅವರು ಯಾತ್ರೆ ನಡೆಸಿದ್ದಾದರೂ ಯಾರೊಂದಿಗೆ, ತಮಿಳುನಾಡಿನಲ್ಲಿ ದೇಶದ ವಿರುದ್ಧ ಮಾತಾಡಿದ್ದ ವ್ಯಕ್ತಿಯೊಂದಿಗೆ ಅವರು ಯಾತ್ರೆ ಕೈಗೊಂಡರು. ಕೇರಳದಲ್ಲಿ ಗೋಹತ್ಯೆ ಮಾಡಿ ಫೋಟೋವನ್ನು ಇಂಟರ್ನೆಟ್ನಲ್ಲಿ ಅಪ್ಲೋಡ್ ಮಾಡಿದವರೊಂದಿಗೆ ಕೈಗೊಂಡರು. ಕಾಂಗ್ರೆಸ್ಸಿಗರೆ, ಭಾರತದ ಪವಿತ್ರ ನೆಲದಲ್ಲಿ ಕಾಲಿಟ್ಟು ಕೊಳಕಾಗುವಂತೆ ಮಾಡಬೇಡಿ ಎಂದು ವಾಗ್ದಾಳಿ ನಡೆಸಿದರು.
ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸುವ ನಿರ್ಣಯಗಳನ್ನು ಮಂಡಿಸಿದವರೊಂದಿಗೆ ಅವರು ಯಾತ್ರೆ ಕೈಗೊಂಡಿದ್ದಾರೆ. “ನಿಮ್ಮ ನಾಯಕ ವಿಘಟಿತ ಭಾರತವನ್ನು ನೋಡಲು ಬಯಸುವವರನ್ನು ಬೆಂಬಲಿಸಿದಾಗ ನಿಮ್ಮ ರಕ್ತ ಕುದಿಯುವುದಿಲ್ಲವೇ, ನಿಮ್ಮ ನಾಯಕ ಗೋಹತ್ಯೆ ಮಾಡುವವರ ಬೆನ್ನು ತಟ್ಟಿದಾಗ ನಿಮ್ಮ ರಕ್ತ ಕುದಿಯುವುದಿಲ್ಲವೇ?” ಎಂದು ಇರಾನಿ ಕಾಂಗ್ರೆಸ್ ಕಾರ್ಯಕರ್ತರನ್ನು ಪ್ರಶ್ನಿಸಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ