ಹೊಸದಿಗಂತ ಡಿಜಿಟಲ್ ಡೆಸ್ಕ್:
2ನೇ ತರಗತಿ ಸರ್ಕಾರಿ ಶಿಕ್ಷಕರ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಪ್ರಮುಖ ಆರೋಪಿ ಭೂಪೇಂದ್ರ ಸರನ್ನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಪ್ರಮುಖ ಆರೋಪಿ ಭೂಪೇಂದ್ರ ಸರನ್ನನ್ನು ನಿನ್ನೆ ಬೆಂಗಳೂರು ವಿಮಾನ ನಿಲ್ದಾಣದಿಂದ ರಾಜಸ್ಥಾನ ಪೊಲೀಸರು ಬಂಧಿಸಿದ ನಂತರ ಉದಯಪುರಕ್ಕೆ ಕರೆತರಲಾಯಿತು ಎಂದು ಶುಕ್ರವಾರ ರಾಜಸ್ಥಾನ ಪೊಲೀಸರು ತಿಳಿಸಿದ್ದಾರೆ.
ವಿಶೇಷ ಕಾರ್ಯಾಚರಣೆ ತಂಡ (ಎಸ್ಒಜಿ) ಮತ್ತು ರಾಜಸ್ಥಾನ ಪೊಲೀಸರ ತಂಡ ಗುರುವಾರ ರಾತ್ರಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸರನ್ನನ್ನು ಹಿಡಿದಿದ್ದು, ಆತನ ವಿರುದ್ಧ ಉದಯಪುರದ ಎರಡು ವಿಭಿನ್ನ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.
ಪೊಲೀಸರ ಪ್ರಕಾರ, ಎರಡನೇ ತರಗತಿಯ ಪೇಪರ್ ಸೋರಿಕೆ ಪ್ರಕರಣದಲ್ಲಿ ವಿಚಾರಣೆಗಾಗಿ ಶುಕ್ರವಾರ ಸರನ್ನನ್ನು ಉದಯಪುರಕ್ಕೆ ಕರೆತರಲಾಗಿದ್ದು, ಸದ್ಯ ಸರನ್ ಉದಯಪುರದ ಹಾಥಿಪೋಲ್ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ.
ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಜೋಧ್ಪುರ (ಗ್ರಾಮೀಣ) ಧರ್ಮೇಂದ್ರ ಸಿಂಗ್ ಯಾದವ್ ಅವರ ಸೂಚನೆಯ ಮೇರೆಗೆ ಎಸ್ಒಜಿ-ಎಟಿಎಸ್ (ಭಯೋತ್ಪಾದನಾ ನಿಗ್ರಹ ದಳ) ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ. ಕಳೆದ ಆರು ದಿನಗಳಿಂದ ಬೆಂಗಳೂರಿನಲ್ಲಿ ಮೊಕ್ಕಾಂ ಹೂಡಿ ಸರನ್ನನ್ನು ಬಂಧಿಸುವಲ್ಲಿ ಎಸ್ಒಜಿ ಯಶಸ್ವಿಯಾಗಿದೆ.
ಭೂಪೇಂದ್ರ ಸರನ್ ಬಂಧನಕ್ಕೆ 1 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಸರಣ್ ತನ್ನ ಸ್ಥಳವನ್ನು ಆಗಾಗ್ಗೆ ಬದಲಾಯಿಸಿದ್ದರಿಂದ ಪೊಲೀಸರಿಗೆ ನುಂಗಲಾರದ ಬಿಸಿ ತುಪ್ಪವಾಗಿದ್ದ.