ಹೊಸದಿಗಂತ ಡಿಜಿಟಲ್ ಡೆಸ್ಕ್
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ಎ ತಂಡದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ರಜತ್ ಪಾಟಿದಾರ್ ಅವರ ಭರ್ಜರಿ ಶತಕದ ಬಲದಿಂದ ಇಂಡಿಯಾ ಏ ಜಯದತ್ತ ದಾಪುಗಾಲು ಇಟ್ಟಿದೆ.
ಕೆಲದಿನಗಳ ಹಿಂದೆ ಇದೇ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲೂ ಶತಕ ಸಿಡಿಸಿದ್ದ ಆರ್ಸಿಬಿ ಸ್ಟಾರ್ ಪಟೀದಾರ್ ಮತ್ತೊಂದು ಸೊಗಸಾದ ಶತಕ ಸಿಡಿಸುವ ಮೂಲಕ ಆಯ್ಕೆದಾರರಿಗೆ ಬಲವಾದ ಸಂದೇಶ ರವಾನಿಸಿದ್ದಾರೆ.
ಶನಿವಾರ ಮೂರನೇ ದಿನದಾಟ ಆರಂಭಿಸಿದ ಭಾರತ ತಂಡಕ್ಕೆ ಋತು- ರಜತ್ ಆಸರೆಯಾದರು. ರುತುರಾಜ್ ಗಾಯಕ್ವಾಡ್ ತನ್ನ ಎರಡನೇ ಶತಕವನ್ನು ಕೇವಲ ಆರು ರನ್ಗಳಿಂದ ತಪ್ಪಿಸಿಕೊಂಡರು. ಗಾಯಕ್ವಾಡ್ 164 ಎಸೆತಗಳಲ್ಲಿ 94 ರನ್ ಬಾರಿಸಿ ಶತಕ ವಂಚಿತರಾದರೆ, ಪಟೀದಾರ್ ಅಬಬರಕ್ಕೆ ಬೌಲರ್ ಗಳು ಕಂಗಾಲಾದರು. 135 ಎಸೆತಗಳಲ್ಲಿ 109 ರನ್ ಗಳಿಸಿದ ಪಾಟಿದಾರ್ ಮೈದಾನದ ಮೂಲೆ ಮೂಲೆಗೆ ಚಂಡನ್ನು ದಂಡಿಸಿದರು.
ಆರ್ಸಿಬಿ ಆಟಗಾರನ ಇನ್ನಿಂಗ್ಸ್ ನಲ್ಲಿ 13 ಬೌಂಡರಿ ಮತ್ತು ಎರಡು ಭರ್ಜರಿ ಸಿಕ್ಸರ್ಗಳಿದ್ದವು. ಅವರನ್ನು ಜೊತೆಗೂಡಿದ ಸರ್ಫರಾಜ್ ಖಾನ್ ಸಹ ಟಿ 20 ಮಾದರಿಯಲ್ಲಿ ಬ್ಯಾಟ್ ಬೀಸಿದರು. ಸರ್ಫರಾಜ್ ಖಾನ್ ಕೇವಲ 74 ಎಸೆತಗಳಲ್ಲಿ 63 ರನ್ ಸಿಡಿಸಿದರು. ಇವರಿಬ್ಬರು ಕೇವಲ 20 ಓವರ್ಗಳಲ್ಲಿ 108 ರನ್ಗಳನ್ನು ಸೇರಿಸಿದರು.
ಈ ಮೂಲಕ ಆತಿಥೇಯರು 7 ವಿಕೆಟ್ ನಷ್ಟಕ್ಕೆ 359 ರನ್ ಗಳಿಸಿ ಎರಡನೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು.
416 ರನ್ಗಳ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ಎ ಮೂರನೇ ದಿನದಾಟದಲ್ಲಿ ಒಂದು ವಿಕೆಟ್ಗೆ 20 ರನ್ಗಳಿಸಿದೆ. ಸೌರಭ್ ಕುಮಾರ್ ಅವರು ರಚಿನ್ ರವೀಂದ್ರ ಅವರನ್ನು ಔಟ್ ಮಾಡಿ ಭಾರತ ಎ ತಂಡಕ್ಕೆ ಮೇಲುಗೈ ಒದಗಿಸಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ