ಹೊಸ ದಿಗಂತ ಡಿಜಿಟಲ್ ಡೆಸ್ಕ್
ಸಚಿವರ ಹಂತದ 2+2 ಮಾತುಕತೆಗೆಂದು ಅಮೆರಿಕದಲ್ಲಿರುವ ರಕ್ಷಣಾ ಸಚಿವ ರಾಜನಾಥ ಸಿಂಗ್, ಶುಕ್ರವಾರ ಅಲ್ಲಿನ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಆಡಿದ ಮಾತುಗಳಲ್ಲಿ ಎರಡು ಸಂದೇಶಗಳು ಹೊರಬಿದ್ದಿವೆ.
ಭಾರತವನ್ನು ಕೆಣಕಲು ಬಂದ ಯಾರನ್ನೂ ಸುಮ್ಮನೆ ಬಿಡುವ ಪ್ರಶ್ನೆ ಇಲ್ಲ ಎನ್ನುವ ಮೂಲಕ ಚೀನಾಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ ಸಚಿವ ರಾಜನಾಥ ಸಿಂಗ್. ಗಲ್ವಾನ್ ಘಟನೆಯನ್ನು ನೆನಪಿಸಿಕೊಂಡು ಅವರಾಡಿದ ಮಾತುಗಳು ಹೀಗಿವೆ-
“ಅವರು (ಭಾರತೀಯ ಸೈನಿಕರು) ಅವತ್ತು ಏನು ಮಾಡಿದರು ಮತ್ತು ಸರ್ಕಾರ ಯಾವ ನಿರ್ಧಾರ ತೆಗೆದುಕೊಂಡಿತ್ತು ಎಂಬುದರ ಬಗ್ಗೆ ನಾನು ಬಹಿರಂಗ ಮಾಡುವಂತಿಲ್ಲ. ಆದರೆ, ಭಾರತಕ್ಕೆ ಹಾನಿ ಮಾಡಿದರೆ ಅದು ಸುಮ್ಮನಿರುವುದಿಲ್ಲ ಎಂಬ ಸ್ಪಷ್ಟ ಸಂದೇಶವೊಂದು (ಚೀನಾಕ್ಕೆ) ರವಾನೆಯಾಗಿದೆ.”
ಇದು ಚೀನಾವನ್ನು ಉಲ್ಲೇಖಿಸದೇ ರಾಜನಾಥ ಸಿಂಗ್ ಬಿತ್ತರಿಸಿದ ಸಂದೇಶವಾದರೆ, ಅಮೆರಿಕದ ಹೆಸರು ಹೇಳದೆಯೂ ಅದಕ್ಕೂ ಒಂದು ಸಂದೇಶ ರವಾನಿಸಿದ್ದಾರೆ.
“ರಾಜತಾಂತ್ರಿಕತೆಯಲ್ಲಿ ಇದು ಅಲ್ಲವೇ ಅದು ಎಂಬ ನೀತಿಗಳನ್ನು ಭಾರತ ಒಪ್ಪುವುದಿಲ್ಲ. ನಾವು ಯಾವುದೋ ದೇಶದ ಜತೆ ಸ್ನೇಹದಿಂದ ಇದ್ದೇವೆ ಎಂದರೆ ಇನ್ನೊಂದು ದೇಶದ ಜತೆ ಮೈತ್ರಿ ಕಡಿಮೆಯಾಗುತ್ತದೆ ಎಂದಲ್ಲ” ಎನ್ನುವ ಮೂಲಕ ರಷ್ಯದ ವಿರುದ್ಧ ನಿಲುವು ತಾಳಬೇಕು ಎಂಬ ಅಮೆರಿಕದ ಒತ್ತಡವನ್ನು ಪರೋಕ್ಷವಾಗಿ ನಿರಾಕರಿಸಿದ್ದಾರೆ. ಮುಂದುವರಿದು, “ಭಾರತದ ಪ್ರತಿಷ್ಠೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎತ್ತರಕ್ಕೆ ಹೋಗಿದೆ. ಇನ್ನು ಕೆಲ ವರ್ಷಗಳಲ್ಲಿ ಭಾರತವು ಜಗತ್ತಿನ ಪ್ರಮುಖ ಅರ್ಥವ್ಯವಸ್ಥೆಗಳಲ್ಲೊಂದಾಗುವುದನ್ನು ಯಾರಿಗೂ ತಡೆಯಲಾಗದು” ಎಂದಿದ್ದಾರೆ.