ಹೊಸದಿಗಂತ ಡಿಜಿಟಲ್ ಡೆಸ್ಕ್
ಅಯೋಧ್ಯೆ: ಧರ್ಮ ನಗರಿ ಅಯೋಧ್ಯೆಯ ಜನ್ಮಭೂಮಿಯಲ್ಲಿ ರಾಮಲಲ್ಲಾನ ಭವ್ಯ ಮಂದಿರ ನಿರ್ಮಾಣದ ಮತ್ತೊಂದು ಹಂತ ಪ್ರಾರಂಭವಾಗಿದೆ. ಸೋಮವಾರ ಜನ್ಮಭೂಮಿ ಸಂಕೀರ್ಣದಲ್ಲಿ ಪೂಜೆಯ ನಂತರ ಇದಕ್ಕೆ ಚಾಲನೆ ನೀಡಲಾಯಿತು.
ಶ್ರೀರಾಮ ಜನ್ಮಭೂಮಿ ಸ್ಥಳದಲ್ಲಿ ನಿರ್ಮಿಸಲಾದ ರಾಫ್ಟ್ ಮೇಲೆ ಗ್ರಾನೈಟ್ ಕಲ್ಲುಗಳನ್ನು ಇರಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಈ ಗ್ರಾನೈಟ್ ಕಲ್ಲುಗಳು ಮಂದಿರದ ತಳಪಾಯ(ಅಧಿಷ್ಠಾನ) ವನ್ನು 16.5 ಅಡಿ ಎತ್ತರಕ್ಕೆ ಹೆಚ್ಚಿಸಲು ಸಹಾಯ ಮಾಡುತ್ತವೆ. ಇದಕ್ಕೆ ಮಿರ್ಜಾಪುರ ಮತ್ತು ಬೆಂಗಳೂರಿನ ಗ್ರಾನೈಟ್ ಕಲ್ಲುಗಳನ್ನು ಬಳಸಲಾಗುತ್ತದೆ.
ಈ ಸಂದರ್ಭದಲ್ಲಿ ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ವಿಶ್ವಸ್ಥರಾದ ಡಾ. ಅನಿಲ್ ಮಿಶ್ರಾ, ಅಯೋಧ್ಯೆ ರಾಜಮನೆತನದ ವಿಮಲೇಂದ್ರ ಮೋಹನ್ ಮಿಶ್ರಾ, ನಿರ್ಮೋಹಿ ಅಖಾರದ ಮಹಂತ್ ದಿನೇಂದ್ರ ದಾಸ್, ಪ್ರಮುಖರಾದ ಕೋಟೇಶ್ವರ ಶರ್ಮಾ, ಗೋಪಾಲ್ ಎಂ., ಲಾರ್ಸನ್ ಆಂಡ್ ಟೌರ್ಬೊದ ವಿನೋದ್ ಮೆಹ್ತಾ, ಟಾಟಾದ ವಿನೋದ್ ಶುಕ್ಲಾ, ಜಗದೀಶ ಅಫ್ಲೇ ಹಾಗೂ ಆಡಳಿತ ಅಧಿಕಾರಿಗಳು, ಇಂಜಿನಿಯರ್ಗಳು ಉಪಸ್ಥಿತರಿದ್ದರು.