ಹೊಸದಿಗಂತ ವರದಿ,ಮಂಗಳೂರು:
ಅನುಮಾನಾಸ್ಪದ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಿದ ರೈಲ್ವೇ ಪೊಲೀಸರು
ಯಾವುದೇ ದಾಖಲೆಗಳಿಲ್ಲದೆ ಅಕ್ರಮವಾಗಿ ರೂ.೧.೪೮ ಕೋಟಿ ನಗದು ಮತ್ತು ೪೦ ಸಾವಿರ ಮೌಲ್ಯದ ಚಿನ್ನಾಭರಣ ಸಾಗಿಸುತ್ತಿದ್ದ ಪ್ರಯಾಣಿಕನೋರ್ವನನ್ನು ವಶಕ್ಕೆ ಪಡೆದಿರುವ ಮಂಗಳೂರು ರೈಲ್ವೇ ಪೊಲೀಸರು ನಗದು ಸಹಿತ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತನನ್ನು ವಿಚಾರಣೆಗೊಳಪಡಿಸಲಾಗಿದೆ. ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ರೈಲ್ವೇ ನಿಲ್ದಾಣದಲ್ಲಿ ಪ್ರಯಾಣಿಕರ ಬಿಗಿ ತಪಾಸಣೆ ನಡೆಯುತ್ತಿದೆ. ರೈಲಿನ ಮೂಲಕ ಕೇರಳದಿಂದ ಮಂಗಳೂರು ಜಂಕ್ಷನ್ ರೈಲ್ವೇ ನಿಲ್ದಾಣಕ್ಕೆ ಬಂದ ಪ್ರಯಾಣಿಕನ್ನು ಕೂಡ ತಪಾಸಣೆಗೊಳಪಡಿಸಲಾಗಿತ್ತು .ಈ ವೇಳೆ ಆತನ ಬಳಿ ದಾಖಲೆಗಳಿಲ್ಲದ ನಗದು ಮತ್ತು ಚಿನ್ನಾಭರಣ ಪತ್ತೆಯಾಗಿದೆ.
ಬಂಧಿತತ ಪ್ರಯಾಣಿಕ ಪನ್ವೇಕ್ ರೈಲು ನಿಲ್ದಾಣದಿಂದ ಮಂಗಳೂರಿಗೆ ಆಗಮಿಸಿದ್ದ. ಈತನ ಬಳಿ ಇದ್ದ ಕಪ್ಪು ಬಣ್ಣದ ಬ್ಯಾಗ್ ತಪಾಸಣೆ ನಡೆಸಿದಾಗ ಅದರಲ್ಲಿ ರೂ. ೧,೪೮,೫೮,೦೦೦ ನಗದು ಮತ್ತು ೪೦ ಲಕ್ಷ ರೂ. ಮೌಲ್ಯದ ೮೦೦ ಗ್ರಾಂ ಚಿನ್ನಾಭರಣ ಪತ್ತೆಯಾಗಿದೆ. ಇವುಗಳಿಗೆ ಪ್ರಯಾಣಿಕನಲ್ಲಿ ಯಾವುದೇ ದಾಖಲಾತಿ ಇಲ್ಲದೆ ಇರುವುದರಿಂದ ರೈಲ್ವೇ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.