ಹೊಸದಿಗಂತ ವರದಿ,ಹಾವೇರಿ :
ರಾಮನಗರದ ರಾಮ ದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಾಣ ಆಗೇ ಆಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಭಾನುವಾರ ಅವರು ಶಿಗ್ಗಾವಿ ಪಟ್ಟಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ರಾಮದೇವರ ಬೆಟ್ಟ ಐತಿಹಾಸಿಕವಾದುದು. ಹೊಸ ರಾಮಮಂದಿರ ನಿರ್ಮಾಣ ಮಾಡಬೇಕೆಂದು ಹಲವಾರು ಜನರ ಇಚ್ಛೆಯಾಗಿತ್ತು. ನನ್ನ ಪ್ರಕಾರ ಯಾರೂ ಇದಕ್ಕೆ ವಿರೋಧ ಮಾಡುವುದಿಲ್ಲ. ವಿರೋಧ ಮಾಡುವವರು ವಿರೋಧಿಸಲಿ. ನನ್ನ ತಕಾರಾರಿಲ್ಲ ಎಂದರು.
ಬಿಜೆಪಿ, ಕಾಂಗ್ರೆಸ್ ಹಾಗೀ ಜೆಡಿಎಸ್ ಎಂದು ರಾಮ ಮಂದಿರ ನಿರ್ಮಾಣ ಮಾಡುತ್ತಿಲ್ಲ. ಐತಿಹಾಸಿಕ ರಾಮನ ಬೆಟ್ಟವಿದೆ ಹೀಗಾಗಿ ರಾಮ ಮಂದಿರ ನಿರ್ಮಾಣ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಮಾತಿಗೆ ತಪ್ಪಿದ ಮಗ
ಕಾಂಗ್ರೆಸ್ನವರು ಇಷ್ಟು ದಿನ ಜನರ ಕಿವಿಗೆ ಹೂವಿಟ್ಟಿದ್ದರು. ಸಿದ್ದರಾಮಯ್ಯ ಅವರು ಮಾತಿಗೆ ತಪ್ಪಿದ ಮಗ. ಬಜೆಟ್ನಲ್ಲಿ ಹೇಳಿದ್ದ ಯಾವುದನ್ನೂ ಅನುಷ್ಠಾನ ಮಾಡಿಲ್ಲ. ಮೊದಲು ೧೦ ಕೆಜಿ ಅಕ್ಕಿ ಕೊಡುತ್ತೇವೆ ಎಂದರು. ಆಮೇಲೆ ಅದನ್ನು ೪ ಕೆಜಿಗೆ ಇಳಿಸಿದರು. ಚುನಾವಣೆ ಸಮಯದಲ್ಲಿ ೭ ಕೆಜಿಗೆ ಏರಿಸಿದರು. ಹೀಗೆ ಜನರನ್ನು ಯಾಮಾರಿಸಿದ್ದಾರೆ. ಅವರಿಗೆ ಜನ ಶಾಶ್ವತವಾಗಿ ಹೂವಿಡುವ ಕೆಲಸವಾಗುತ್ತದೆ ಎಂದರು.
ಐಎಎಸ್, ಐಪಿಎಸ್ ಅಧಿಕಾರಿಗಳ ನಡುವಿನ ಜಟಾಪಟಿಗೆ ಪ್ರತಿಕ್ರೀಯೆ ನೀಡುವುದಿಲ್ಲ ಎಂದ ಮುಖ್ಯಮಂತ್ರಿಗಳು.