ಹೊಸದಿಗಂತ ವರದಿ, ಚಿತ್ರದುರ್ಗ:
ಪಕ್ಷಕ್ಕಾಗಿ ದೇವರನ್ನು ಅಡ ಇಟ್ಟುಕೊಂಡು, ಬೀದಿ ಬೀದಿ ಸುತ್ತಿಸಿದ ಬಿಜೆಪಿಯವರಿಗೆ ರಾಮನ ಶಾಪ ತಟ್ಟಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಕಿಡಿಕಾರಿದ್ದಾರೆ.
ಚಿತ್ರದುರ್ಗ ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿತಾಪತಿ ಮಾಡುವುದೊಂದೇ ಬಿಜೆಪಿಯವರ ಕೆಲಸ. ಅದರಲ್ಲೇ ನಂಬರ್ ಒನ್ ಅವರು. ಆದ್ದರಿಂದ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ರಾಮನ ಶಾಪ ತಟ್ಟಲಿದೆ. ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಬಿಜೆಪಿಯವರು ಮಾತ್ರ ರಾಮನ ಭಕ್ತರ, ನಾವೇನು ರಾಮನ ಭಕ್ತರು ಅಲ್ಲವೇ? ಎಂದು ಪ್ರಶ್ನಿಸಿದ ಅವರು, ಸಂವಿಧಾನದಡಿ ಅಧಿಕಾರ ನಡೆಸುವವರು ಜವಬ್ದಾರಿಯಿಂದ ನಡೆದುಕೊಳ್ಳಬೇಕು. ಅದನ್ನು ಬಿಟ್ಟು ಧರ್ಮ, ದೇವರು ಹಿಂದೂ ವಿರೋಧಿ ಎಂದು ಬೇರೆಯವರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಬಿಡಬೇಕು ಎಂದು ಹೇಳಿದರು.
ಓರಿಸ್ಸಾ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಕಾನೂನು ಸತ್ತು ಹೋಗಿದೆ. ರಾಹುಲ್ ಗಾಂಧಿ ಪಾದಯಾತ್ರೆಗೆ ಕಲ್ಲುತೂರಾಟ ನಡೆಸಿ ಅಡ್ಡಿಪಡಿಸುತ್ತಿದ್ದಾರೆ. ಅಲ್ಲಿನ ಸರ್ಕಾರ ಕಾನೂನನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಲೋಕಸಭಾ ಚುನಾವಣೆಯಲ್ಲಿ ಯಾರು ಸ್ಪರ್ಧೆ ಮಾಡಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನ ಮಾಡಲಿದೆ. ಪಕ್ಷ ಎಲ್ಲಿ ಹೇಳುತ್ತೇ ಅಲ್ಲಿ ಓಡಾಟ ಮಾಡಿ, ಸಂಘಟನೆ ಮಾಡುತ್ತೇವೆ ಎಂದು ಹೇಳಿದ ಅವರು, ಸಚಿವರುಗಳಿಗೆ ಟಿಕೇಟ್ ನೀಡುವ ನಿಟ್ಟಿನಲ್ಲಿಯೂ ಪಕ್ಷ ತೀರ್ಮಾನ ಮಾಡಲಿದೆ. ಅದಕ್ಕೆ ನಾವು ಬದ್ದರಾಗಿರುತ್ತೇವೆ. ಕಾಂಗ್ರೇಸ್ ಪಕ್ಷದಲ್ಲಿ ಎಲ್ಲರನ್ನು ಗಮನದಲ್ಲಿಟ್ಟುಕೊಂಡು ಎಲ್ಲದಕ್ಕೂ ಒತ್ತು ಕೊಡಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹಾಜರಿದ್ದರು.